ಕಾಂಗ್ರೆಸ್‍ಗೆ ಜಂಪ್ ಆಗ್ತಾರಾ ಬಾಂಬೆ ಫ್ರೆಂಡ್ಸ್? – ಬಿಜೆಪಿ ಸ್ಥಳೀಯ ನಾಯಕರ ವಿರುದ್ಧ ಎಸ್‍ಟಿಎಸ್ ಕೆಂಡ

Public TV
2 Min Read
ST Somashekar Says He Is Not Joining Congress

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election) ಹೊಸ್ತಿಲಲ್ಲಿ ರಾಜ್ಯದಲ್ಲಿ ಆಪರೇಷನ್ ಚರ್ಚೆ ಜೋರಾಗಿದೆ. ರಾಜ್ಯದಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಬೇಕು ಎಂದು ಪಟ್ಟು ಹಿಡಿದಿರುವ ಕಾಂಗ್ರೆಸ್ ನಾಯಕರು (Congress Leaders) ಈಗ ಬಾಂಬೆ ಸ್ನೇಹಿತರಿಗೆ ಗಾಳ ಹಾಕಿದ್ದಾರೆ. ಅದರಲ್ಲೂ ಯಶವಂತಪುರದ ಶಾಸಕ ಎಸ್.ಟಿ. ಸೋಮಶೇಖರ್ (ST Somashekar) ವಾಪಸ್ ಕಾಂಗ್ರೆಸ್‍ಗೆ ಬರುತ್ತಾರೆ ಎಂಬ ವದಂತಿ ಹಬ್ಬಿದ್ದು, ಕಾಂಗ್ರೆಸ್ ಸೇರುವ ಸಂಬಂಧ ಅಭಿಪ್ರಾಯ ಪಡೆಯಲು ಗುರುವಾರ ಎಸ್‌ಟಿಎಸ್‌ ಬೆಂಬಲಿಗರ ಸಭೆ ನಡೆಸಿದ್ದಾರೆ.

ಯಶವಂತಪುರ ಕ್ಷೇತ್ರದ ಹೇರೋಹಳ್ಳಿಯಲ್ಲಿರುವ ಶಾಸಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಆಪ್ತ, ನೆಲಮಂಗಲದ ಕಾಂಗ್ರೆಸ್ ಶಾಸಕ ಎನ್. ಶ್ರೀನಿವಾಸ್ ಭಾಗಿಯಾಗಿದ್ದು ಕುತೂಹಲವಾಗಿತ್ತು. ಕಾಂಗ್ರೆಸ್ ಸೇರ್ಪಡೆ ವದಂತಿ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಸೋಮಶೇಖರ್, ನಮ್ಮ ಕ್ಷೇತ್ರದ ಬಿಡಿಎ ಲೇಔಟ್‍ಗೆ ಡಿಕೆಶಿ ಬಂದಿದ್ದರು. ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇನೆ. ನಾನು ರಾಜಕೀಯ ಮಾತನಾಡಿಲ್ಲ. ಆದರೆ ಸ್ಥಳೀಯ ಮೂಲ ಬಿಜೆಪಿಗರು ನನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.  ಇದನ್ನೂ ಓದಿ: ಸರ್ಕಾರ ಮಾಡುವಾಗ ದಮ್ಮಯ್ಯ ಬನ್ನಿ ಅಂತಾ ಕರೆದ್ರು, ಈಗ ಬರ್ತೀವಿ ಅಂದ್ರೂ ಸೇರಿಸಿಕೊಳ್ಳೋರಿಲ್ಲ: ವಿಶ್ವನಾಥ್‌

ಡಿಕೆಶಿ ಅವರನ್ನು ನಾನು ಹೊಗಳಿದ್ದನ್ನೇ ಸ್ಥಳೀಯ ಬಿಜೆಪಿಗರು ವೈರಲ್ ಮಾಡುತ್ತಿದ್ದಾರೆ. ಡಿಕೆಶಿ ಹೊಗಳಿದ್ದಕ್ಕೆ ನಾನು ಕಾಂಗ್ರೆಸ್‍ಗೆ ಹೋಗುತ್ತೇನೆ. ಲೋಕಸಭೆಗೆ ಅಪ್ಪ, ವಿಧಾನಸಭೆಗೆ ಮಗ ಎಂದು ಸೋಷಿಯಲ್ ಮೀಡಿಯಾದಲ್ಲಿ ಬಿಂಬಿಸುತ್ತಿದ್ದಾರೆ. ಬಿಜೆಪಿಯವರೇ ನನಗೆ ಕಾಂಗ್ರೆಸ್‍ಗೆ ಕಳಿಸುವಂತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಬೆಳಗ್ಗೆ ನಳಿನ್‌ ಕುಮಾರ್‌ ಕಟೀಲ್, ಸಿ.ಟಿ ರವಿ ಕಾಲ್ ಮಾಡಿದರು. ಸದಾನಂದ ಗೌಡರೂ ಮನೆಗೆ ಕರೆಸಿ ಮಾತಾಡಿದರು. 2 ಸಲ ಪ್ರಧಾನಿಯವರ ಕಾರ್ಯಕ್ರಮವನ್ನೂ ಮಾಡಿದ್ದೇನೆ. ನಾನೇನೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಬಿಜೆಪಿ ಬಿಟ್ಟು ಹೋಗುವುದಿಲ್ಲ. ಇದರಲ್ಲಿ ಅನುಮಾನ ಇಲ್ಲ. ರಾಜ್ಯಾಧ್ಯಕ್ಷರ ಭೇಟಿಗೆ ಸಮಯ ಕೇಳಿದ್ದೇನೆ ಎಂದರು.

ಕಾಂಗ್ರೆಸ್‍ನವರು ಬನ್ನಿ ಎಂದು ಕರೆದಿಲ್ಲ. ನಾನೂ ಹೋಗುತ್ತೇನೆ ಎಂದು ಅರ್ಜಿ ಹಾಕಿಲ್ಲ. ಆದರೆ ಸ್ಥಳೀಯರು ನನ್ನನ್ನು ಕಾಂಗ್ರೆಸ್‌ಗೆ ಕಳುಹಿಸಲೇಬೇಕು ಎಂಬಂತೆ ವರ್ತಿಸುತ್ತಿದ್ದಾರೆ. ಸ್ಥಳೀಯವಾಗಿ ನನ್ನ ವಿರುದ್ಧ ಇರುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಸೋಮಶೇಖರ್ ಹೇಳಿದರು.

 

ಸಭೆ ನಡೆಸಿದ್ದು ಯಾಕೆ?
ಸೋಮಶೇಖರ್ ಮತ್ತು ಅವರ ಬೆಂಬಲಿಗರಿಗೆ ಸ್ಥಳೀಯ ಬಿಜೆಪಿ ಮುಖಂಡರ ಜತೆ ಶೀತಲ ಸಮರ ನಡೆಯುತ್ತಿದ್ದು, ಹೊಂದಾಣಿಕೆ ಸಮಸ್ಯೆಯಿದೆ. ಕಳೆದ ಚುನಾವಣೆಯಲ್ಲಿ ಸೋಮಶೇಖರ್ ಸೋಲಿಸಲು ಸ್ಥಳೀಯ ಬಿಜೆಪಿ ಮುಖಂಡರು ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ನೀಡಿದ್ದರು ಎನ್ನುವುದು ಪ್ರಮುಖ ಆರೋಪ. ಇದಾದ ನಂತರ ಎರಡೂ ಬಣಗಳ ಮಧ್ಯೆ ಬಿರುಕು ಹೆಚ್ಚಾಗಿದೆ. ಹೀಗಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದು ಉತ್ತಮ ಎಂದು ಸೋಮಶೇಖರ್ ಮೇಲೆ ಅವರ ಬೆಂಬಲಿಗರು ಒತ್ತಾಯ ಹಾಕ್ತಿದಾರೆ. ಈ ಕಾರಣಕ್ಕೆ ಇವತ್ತು ಸೋಮಶೇಖರ್ ಸಭೆ ಕರೆದು ಚರ್ಚೆ ನಡೆಸಿದ್ದಾರೆ.

ಈ ಸಭೆಯಲ್ಲೂ ಬೆಂಬಲಿಗರು ಕಾಂಗ್ರೆಸ್ ಸೇರುವಂತೆ ಒತ್ತಡ ಹಾಕಿದಾರೆ ಎನ್ನಲಾಗಿದೆ. ಇದರಿಂದ ದಿಕ್ಕು ತೋಚದ ಶಾಸಕ ಸೋಮಶೇಖರ್ ಮೂರ್ನಾಲ್ಕು ದಿನಗಳ ಕಾಲ ಬೆಂಬಲಿಗರಿಂದ ಸಮಯ ಪಡೆದಿದ್ದು, ಬಿಜೆಪಿ ರಾಜ್ಯ ನಾಯಕರ ಜತೆ ಚರ್ಚೆಗೆ ನಿರ್ಧರಿಸಿದ್ದಾರೆ.

 
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article