ಮೈಸೂರು: ಕಳೆದ ಎರಡು ದಿನಗಳಿಂದ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಭಾನುವಾರ ರಾತ್ರಿ ಜೆ.ಎಲ್.ಬಿ ರಸ್ತೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವುದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ದೀಪಾಲಂಕಾರವನ್ನು ವೀಕ್ಷಿಸುವಾಗ ಅಗತ್ಯವಾಗಿ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲೆಯ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮನವಿ ಮಾಡಿಕೊಂಡಿದ್ದಾರೆ.
ದಸರಾ ದೀಪಾಲಂಕಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರು ಸಂಜೆ ವೇಳೆ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದೆ. ಈ ಸೊಬಗನ್ನು ಸವಿಯಲು ಹೆಚ್ಚಿನ ಜನರು ಕುಟುಂಬ ಸಮೇತರಾಗಿ ಧಾವಿಸುತ್ತಿರುವುದು ಸಂತೋಷದ ವಿಚಾರ. ಆದರೆ, ಕಳೆದ ಎರಡು ದಿನಗಳಿಂದ ನಗರದಲ್ಲಿ ಧಾರಾಕಾರವಾಗಿ ಮಳೆಯು ಸುರಿಯುತ್ತಿದ್ದು, ಭಾನುವಾರ ರಾತ್ರಿ ಜೆ.ಎಲ್.ಬಿ ರಸ್ತೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವುದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ದೀಪಾಲಂಕಾರವನ್ನು ವೀಕ್ಷಿಸುವಾಗ ಅಗತ್ಯವಾಗಿ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: 3 ಕೋಟಿ ರೂ. ವೆಚ್ಚದ ವಾಲ್ಮೀಕಿ ಸಮುದಾಯ ಭವನಕ್ಕೆ ಭೂಮಿಪೂಜೆ
ರಸ್ತೆಗಳಲ್ಲಿ ಅಳವಡಿಸಿರುವ ಸಿರಿಯಲ್ ಸೆಟ್ ವಿದ್ಯುತ್ ದೀಪಗಳನ್ನು ಮುಟ್ಟುವುದು, ದೀಪಗಳ ನಡುವೆ ನಿಂತು ಸೆಲ್ಫಿ ತೆಗೆದುಕೊಳ್ಳುವುದನ್ನು ಮಾಡಬಾರದು ಎಂದು ಪ್ರತಿಯೊಬ್ಬರಲ್ಲೂ ಮನವಿ ಮಾಡುತ್ತೇನೆ. ಕೋವಿಡ್ ಹಿನ್ನೆಲೆಯಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಸರಳವಾಗಿ, ಸಾಂಪ್ರದಾಯಿಕವಾಗಿ ಹಾಗೂ ವರ್ಚುಯಲ್ ಆಗಿ ಆಚರಿಸಲಾಗುತ್ತಿದೆ. ಆದರೆ ದಸರಾ ಸಂಭ್ರಮ ಎಲ್ಲೆಡೆ ಕಾಣಲಿ ಎಂಬ ಉದ್ದೇಶದಿಂದ ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಕಟ್ಟಡಗಳಲ್ಲಿ ವ್ಯವಸ್ಥೆ ಮಾಡಲಾದ ದೀಪಾಲಂಕಾರವು ನೋಡುಗರ ಕಣ್ಣಿಗೆ ಹಬ್ಬ, ಮನಸ್ಸಿಗೆ ಉಲ್ಲಾಸ ಉಂಟುಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಈ ವಿದ್ಯುತ್ ದೀಪಾಲಂಕಾರದ ಸೌಂದರ್ಯವನ್ನು ದೂರದಿಂದಲೇ ನೋಡಿ ಆನಂದಿಸಬೇಕು. ಯಾರೂ ಕೂಡ ಈ ದೀಪಗಳನ್ನು ಮುಟ್ಟುವ, ಹತ್ತಿರ ನಿಂತು ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸವನ್ನು ಮಾಡಬಾರದು. ದೀಪಾಲಂಕಾರ ಆನಂದ ತರಲಿ, ಅವಘಡ ಆಗದಿರಲಿ ಎಂದು ಆಶಿಸುತ್ತಾ, ನಾಗರಿಕರು ಜಾಗರೂಕತೆಯಿಂದ ಇರಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: RSS ಬಗ್ಗೆ ಮಾತನಾಡೋದು ಬೆಂಕಿ ಜೊತೆ ಸರಸವಿದ್ದಂತೆ: ಈಶ್ವರಪ್ಪ