ಖ್ಯಾತ ನಟ ಸೃಜನ್ ಲೋಕೇಶ್ (Srujan Lokesh) ನಟನಾಗಿ, ನಿರ್ಮಾಪಕನಾಗಿ ಜನಪ್ರಿಯ. ಈಗ ‘GST’ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಈ ಚಿತ್ರವನ್ನು ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಾಣ ಮಾಡಿದ್ದಾರೆ. ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಅರ್ಪಿಸುತ್ತಿದ್ದಾರೆ. ಚಿತ್ರ ಇದೇ ತಿಂಗಳ 28ರಂದು ತೆರೆಗೆ ಬರುತ್ತಿದೆ. ಅದಕ್ಕೆ ಪೂರ್ವಭಾವಿಯಾಗಿ ಟ್ರೇಲರ್ ಬಿಡುಗಡೆಯಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ಟ್ರೇಲರ್ ತಮ್ಮದೇ ಆದ ರೀತಿಯಲ್ಲಿ ಆಕ್ಷನ್ ಹೇಳುವ ಮೂಲಕ ಟ್ರೇಲರ್ ಅನಾವರಣ ಮಾಡಿದರು. ಪ್ರಿಯಾಂಕಾ ಉಪೇಂದ್ರ ನವೆಂಬರ್ 14 ರಂದು ಬಿಡುಗಡೆಯಾಗಲಿರುವ ಚಿತ್ರದ ಹಾಡಿನ ಪ್ರೋಮೊ ರಿಲೀಸ್ ಮಾಡಿದರು. ಉಪೇಂದ್ರ ದಂಪತಿ ಹಾಗೂ ನಟಿ ತಾರಾ ಅನುರಾಧ ಮುಖ್ಯ ಅತಿಥಿಗಳಾಗಿ ಆಗಮಿಸಿ, ‘GST’ಗೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
‘GST’ ಎಂದರೆ ‘ಘೋಸ್ಟ್ ಇನ್ ಟ್ರಬಲ್’ ಎಂದು. ಅದನ್ನು ಈಗ ಸ್ವಲ್ಪ ಬದಲಾವಣೆ ಮಾಡಿ ‘Go see in theater’ ಅಂತ ಹೇಳಬಹುದು. ‘GST’ ನಾನು ಕಂಡ ಕನಸು. ಅದನ್ನು ನನಸು ಮಾಡಿದವರು ನಿರ್ಮಾಪಕ ಸಂದೇಶ್. ನಾನು ಈ ಚಿತ್ರದ ಮೂಲಕ ನಿರ್ದೇಶಕನಾಗಿ ಅಡಿ ಇಟ್ಟಿದ್ದೇನೆ. ಚಿತ್ರದ ಮತ್ತೊಂದು ವಿಶೇಷ ಅಂದರೆ ನಮ್ಮ ತಾತಾ ಸುಬ್ವಯ್ಯ ನಾಯ್ಡು ಅವರು ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ನಮ್ಮ ತಂದೆ ಲೋಕೇಶ್ ಅವರನ್ನು ಬಾಲನಟನಾಗಿ ತೆರೆಗೆ ತಂದರು. ಆನಂತರ ನಮ್ಮ ತಂದೆ ನಿರ್ದೇಶನದ ‘ಬುಜಂಗಯ್ಯನ ದಶಾವತಾರ’ದ ಮೂಲಕ ಬಾಲನಟನಾಗಿ ನಾನು ಚಿತ್ರರಂಗಕ್ಕೆ ಬಂದೆ. ಈಗ ನನ್ನ ಮಗ ಸುಕೃತ್ ನನ್ನ ಮೊದಲ ನಿರ್ದೇಶನದಲ್ಲಿ ಬೆಳ್ಳಿತೆರೆ ಪ್ರವೇಶಿಸಿದ್ದಾನೆ. ಇದು ಭಾರತೀಯ ಚಿತ್ರರಂಗದಲ್ಲೇ ಪ್ರಥಮ ಎನ್ನಬಹುದು. ಇನ್ನು, ಇದರಲ್ಲಿ ನಮ್ಮ ತಾಯಿ, ನಾನು ಹಾಗೂ ನನ್ನ ಮಗ ಮೂರು ಜನ ನಟಿಸಿದ್ದೇವೆ. ಇದು ಹಾರಾರ್ ಚಿತ್ರವಾಗಿದರೂ, ನಗುವೇ ಪ್ರಧಾನ. ಯಾವುದೇ ಸಂದೇಶ ನೀಡದೆ ನಗುವಿನ ಮೂಲಕ ಜನರ ಮನಸ್ಸನ್ನು ಗೆಲ್ಲಲ್ಲಿದ್ದೇನೆ. ಲೋಕೇಶ್ ಮ್ಯೂಸಿಕ್ ಎಂಬ ಮ್ಯೂಸಿಕ್ ಸಂಸ್ಥೆ ಕೂಡ ಆರಂಭಿಸಿದ್ದೇನೆ. ಅದರಲ್ಲಿ ನಮ್ಮ ಚಿತ್ರದ ಹಾಡುಗಳು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಯಾರು ಊಹಿಸಲಾಗದ 4O ನಿಮಿಷಗಳ ಕ್ಲೈಮ್ಯಾಕ್ಸ್ ಇದೆ ನಮ್ಮ ಚಿತ್ರದಲ್ಲಿ ಅನುಭವಿ ಕಲಾವಿದರು ಅಭಿನಯಿಸಿದ್ದಾರೆ. ನುರಿತ ತಂತ್ರಜ್ಞರು ಕಾರ್ಯ ನಿರ್ವಹಿಸಿದ್ದಾರೆ. ಎಲ್ಲರ ಶ್ರಮದಿಂದ ನವೆಂಬರ್ 28 ರಂದು ಚಿತ್ರ ತೆರೆಗೆ ಬರಲಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಉಪೇಂದ್ರ ಹಾಗೂ ಪ್ರಿಯಾಂಕಾ ಅವರಿಗೆ ಧನ್ಯವಾದ. ಮತ್ತೊಂದು ವಿಶೇಷವೆಂದರೆ, ನನ್ನ ಮೊದಲ ಚಿತ್ರದ ನಿರ್ದೇಶನಕ್ಕೆ ಲೆಜೆಂಡ್ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್, ಚಿತ್ರ ಯಶಸ್ವಿಯಾಗಲೆಂದು ಹಾರೈಸಿ ತಮ್ಮ ರುಜು ಹಾಕಿದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಹಾಗೂ ನಿರ್ದೇಶಕ ಸೃಜನ್ ಲೋಕೇಶ್. ಇದನ್ನೂ ಓದಿ: ಇಂದು ರಶ್ಮಿಕಾ, ವಿಜಯ್ ದೇವರಕೊಂಡ ಮದುವೆ ಅಧಿಕೃತ ಘೋಷಣೆ?
ನಾನು ಈ ಚಿತ್ರದ ಕಥೆ ಕೇಳಿಲ್ಲ. ಸೃಜನ್ ನನ್ನ ಆತ್ಮೀಯ ಸ್ನೇಹಿತ. ಅವರು ಒಳ್ಳೆಯ ಚಿತ್ರ ಮಾಡಿರುತ್ತಾರೆ ಎಂಬ ನಂಬಿಕೆ ಇದೆ. ಇದು ನಮ್ಮ ಸಂಸ್ಥೆ ನಿರ್ಮಾಣದ 34ನೇ ಚಿತ್ರ. ಎಂದಿನಂತೆ ಈ ಚಿತ್ರಕ್ಕೂ ನಿಮ್ಮೆಲ್ಲರ ಬೆಂಬಲವಿರಲಿ ಎಂದು ನಿರ್ಮಾಪಕ ಸಂದೇಶ್ ತಿಳಿಸಿದರು.
ಕನ್ನಡ ಚಿತ್ರರಂಗದ ಹಲವು ಪ್ರಥಮಗಳು ಸುಬ್ಬಯ್ಯ ನಾಯ್ಡು ಅವರ ಕುಟುಂಬದ್ದೇ ಆಗಿರುವುದು ನಮಗೆ ಹೆಮ್ಮೆ ಇದೆ. ಇದೇ ಮೊದಲ ಬಾರಿಗೆ ನನ್ನ ಮಗ ಸೃಜನ್ ಲೋಕೇಶ್ ನಿರ್ದೇಶನ ಮಾಡಿದ್ದಾನೆ. ನಾನು ಹಾಗೂ ನನ್ನ ಮೊಮ್ಮಗ ಸುಕೃತ್ ಈ ಚಿತ್ರದಲ್ಲಿ ನಟಿಸಿದ್ದೇವೆ. ನಮ್ಮ ಕುಟುಂಬಕ್ಕೆ ನೀವು ನೀಡುತ್ತಿರುವ ಪ್ರೋತ್ಸಾಹ ಈ ಚಿತ್ರದಲ್ಲೂ ಮುಂದುವರೆಯಲು ಎಂದರು ನಟಿ ಗಿರಿಜಾ ಲೋಕೇಶ್. ಇದನ್ನೂ ಓದಿ: ನಟಿ ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿದ್ದ ಆರೋಪಿ ಅರೆಸ್ಟ್
ಚಿತ್ರೀಕರಣದ ಅನುಭವಗಳ ಬಗ್ಗೆ ಮಾತನಾಡಿದ ನಾಯಕಿ ರಜನಿ ಭಾರದ್ವಾಜ್, ತಮ್ಮ ಪಾತ್ರದ ಕುರಿತು ಮಾತನಾಡಿದರು. ಹಿರಿಯ ನಟ ಅಶೋಕ್ ಅವರು ಸಹ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿ ಚಿತ್ರಕ್ಕೆ ಶುಭ ಕೋರಿದರು. ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಹಾಗೂ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಸೃಜನ್ ಲೋಕೇಶ್ ಪುತ್ರ ಸುಕೃತ್ ನಿರೂಪಣೆ ಮಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.



