ದಾವಣಗೆರೆ: ಶಿವಾಜಿನಗರ ಶಾಸಕ ರೋಷನ್ ಬೇಗ್ ಸ್ವಪಕ್ಷದ ವಿರುದ್ಧ ಹರಿಹಾಯ್ದದ್ದು ಸರಿಯಾಗಿದೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತಗ್ಗಿಬಗ್ಗಿ ನಡೆಯಬೇಕು ಎಂದು ಬಿಜೆಪಿ ಶಾಸಕ ಶ್ರೀರಾಮುಲು ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಕಿವಿಮಾತು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವಾಜಿನಗರ ಶಾಸಕ ರೋಷನ್ ಬೇಗ್ ಸ್ವ-ಪಕ್ಷದ ವಿರುದ್ಧ ಹರಿಹಾಯ್ದದ್ದು ಸರಿಯಿದೆ. ರೋಷನ್ ಬೇಗ್ ಹೇಳೋ ಮಾತುಗಳು ಸರಿಯಾಗಿದೆ. ಸಿದ್ದರಾಮಯ್ಯ ಅವರಿಗೆ ಅಹಂಕಾರ ಬೆಳೆದಿದೆ ಆ ಅಹಂ ಎಲ್ಲಿಗೆ ತೆಗೆದುಕೊಂಡು ಹೋಗುತ್ತೋ ಗೊತ್ತಾಗುತ್ತಿಲ್ಲ. ಮಾತಾಡಲಿ, ಇಂತಹ ನಾಯಕರನ್ನು ರಾಜ್ಯದಲ್ಲಿ ಬಹಳಷ್ಟು ಮಂದಿನ ನೋಡಿದ್ದೇವೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತಗ್ಗಿಬಗ್ಗಿ ನಡೀಬೇಕು, ಬದುಕಬೇಕು ಎಂದಿದ್ದಾರೆ.
ಸಿದ್ದರಾಮಯ್ಯ ಅಹಿಂದ ಸಮುದಾಯ ಬಳಸಿಕೊಂಡು ದೊಡ್ಡ ಮಟ್ಟಕ್ಕೆ ಬೆಳೆದ ನಾಯಕ. ಅವರಿಗೆ ಈಗ ಅಹಂ, ಅಹಂಕಾರ ಎಲ್ಲವೂ ಬಂದಿದೆ. ಸಿದ್ದರಾಮಯ್ಯ ಒಬ್ಬರನ್ನೇ ನೋಡುತ್ತಿಲ್ಲ. ಸಿದ್ದರಾಮಯ್ಯನ ರೀತಿ ಮೆರೆದಂತಹ, ಉರಿದಂತಹ ನಾಯಕರುಗಳು ಎಲ್ಲಾ ರೀತಿಯಲ್ಲೂ, ಎಲ್ಲಾ ಸ್ಥಾನವನ್ನು ಕಳೆದುಕೊಂಡಿರುವುದನ್ನು ನಾವು ನೋಡಿದ್ದೇವೆ ಎಂದು ಟಾಂಗ್ ಕೊಟ್ಟರು.
ಎಕ್ಸಿಟ್ ಪೋಲ್ ಸಮೀಕ್ಷೆ ವಿಚಾರವಾಗಿ ಮಾತನಾಡಿ, ಎಲ್ಲಾ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿಜೀ ಪರವಾಗಿ ಬಂದಿವೆ. ಎಣಿಕೆಯ ನಂತರ 300 ಕ್ಕೂ ಹೆಚ್ಚು ಸ್ಥಾನಗಳು ಎನ್ಡಿಎ ಸರ್ಕಾರಕ್ಕೆ ಬರಲಿದೆ. ಫಲಿತಾಂಶದ ನಂತರ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಕೇಂದ್ರದಲ್ಲಿ ಮೋದಿಯವರು ಪ್ರಮಾಣ ವಚನ ಸ್ವೀಕರಿಸುತ್ತಾರೆ. ರಾಜ್ಯದಲ್ಲಿ ಯಡಿಯೂರಪ್ಪ ನವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.