ಬೆಂಗಳೂರು: ಕೋರ್ ಕಮಿಟಿ ಸಭೆಯಲ್ಲಿ ನನಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ (BJP) ಉಸ್ತುವಾರಿ ರಾಧಾಮೋಹನ ದಾಸ್ (Radha Mohan Das Agarwal) ವಿರುದ್ಧ ಮಾಜಿ ಸಚಿವ ಶ್ರೀರಾಮುಲು (Sriramulu) ಗರಂ ಆಗಿದ್ದಾರೆ.
ನಗರದಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನನಗೆ ಸಭೆಯಲ್ಲಿ ಅಪಮಾನ ಮಾಡಿದ್ದಾರೆ. ಜನಾರ್ದನ ರೆಡ್ಡಿ ನನ್ನ ಟಾರ್ಗೆಟ್ ಮಾಡ್ತಾ ಇದ್ದಾರೆ. ವಿಜಯೇಂದ್ರ ನನ್ನ ಪರ ಇರಲಿಲ್ಲ. ನಾನು ಪಕ್ಷ ಬಿಡುತ್ತೇನೆ, ನಿಮಗೆ ನಾನು ಬೇಡ ಅಂದ್ರೆ ಹೇಳಿ ಅಂದಿದ್ದೆ ಎಂದು ಅಬ್ಬರಿಸಿದ್ದಾರೆ.
ಸಂಡೂರು ಸೋಲಿಗೆ ಶ್ರೀರಾಮುಲು ಕಾರಣ ಎಂದು ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತು ಹೈಕಮಾಂಡ್ಗೆ ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ರಾಮುಲು ಅವರಿಗೆ ರಾಧಾ ಮೋಹನದಾಸ್ ಅಗರವಾಲ್ ಸಭೆಯಲ್ಲಿ ತರಾಟೆ ತೆಗೆದುಕೊಂಡಿದ್ದರು. ಇದರಿಂದ ಅಸಮಾಧಾನಗೊಂಡ ರಾಮುಲು, ಆರ್ಎಸ್ಎಸ್ ನಾಯಕರು ಹಾಗೂ ಕರೆ ಮಾಡಿ ಮೌಖಿಕ ದೂರು ಕೊಟ್ಟಿದ್ದಾರೆ. ಅಲ್ಲದೇ, ನಾನು ಚುನಾವಣೆ ಸೋಲಿನ ನೋವಲ್ಲಿ ಇದ್ದೇನೆ. ಇಂತಹ ಸಂದರ್ಭದಲ್ಲಿ ಈ ಆರೋಪ ಸರಿ ಇಲ್ಲ ಎಂದು ಹೇಳಿದ್ದಾರೆ.
ಜನಾರ್ದನ ರೆಡ್ಡಿ (Janardhana Reddy) ಬಿಜೆಪಿ ಸೇರ್ಪಡೆಗೆ ರಾಮುಲು ಅಡ್ಡಗಾಲು ಹಾಕಿದ್ದರು ಎನ್ನುವ ಆರೋಪ ಇತ್ತು. ಅಲ್ಲಿಂದ ಜನಾರ್ದನ ರೆಡ್ಡಿ ಹಾಗೂ ರಾಮುಲು ನಡುವೆ ಮುನಿಸು ಆರಂಭಗೊಂಡಿತ್ತು. ಅದಾದ ಬಳಿಕ ಸವಾಲಾಗಿ ಸ್ವೀಕರಿಸಿ ಗಂಗಾವತಿಯಿಂದ ಹೊಸ ಪಕ್ಷ ಕಟ್ಟಿ ಸ್ಪರ್ಧೆಗಿಳಿದು, ಜನಾರ್ದನ ರೆಡ್ಡಿ ಗೆದ್ದಿದ್ದರು.
ಸಭೆಯಲ್ಲಿ ಆಗಿದ್ದೇನು?
ಕೋರ್ ಕಮಿಟಿ ಸಭೆಯಲ್ಲಿ ಶ್ರೀರಾಮುಲುಗೆ (Sriramulu) ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ (Radha Mohan Das Agarwal) ಕ್ಲಾಸ್ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಭೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (Sandur By Election) ಬಂಗಾರು ಹನುಮಂತು (Bangaru Hanumanthu) ಸೋಲಿನ ಬಗ್ಗೆ ಚರ್ಚೆ ನಡೆದಿತ್ತು. ಚುನಾವಣೆಯ ಫಲಿತಾಂಶದ ಬಳಿಕ ಶ್ರೀರಾಮುಲು ವಿರುದ್ಧ ಬಿಜೆಪಿ ನಾಯಕರಿಗೆ ಬಂಗಾರು ಹನುಮಂತು ದೂರು ನೀಡಿದ್ದರು. ಬಂಗಾರು ಹನುಮಂತು ದೂರನ್ನು ಆಧರಿಸಿ, ಕೋರ್ ಕಮಿಟಿ ಸಭೆಯಲ್ಲಿ ರಾಧಾಮೋಹನ್ ದಾಸ್ ಅಗರ್ವಾಲ್ ರಾಮುಲು ಅವರ ಕಾರ್ಯವೈಖರಿ ಪ್ರಶ್ನಿಸಿದ್ದರು.
ಕೋರ್ ಕಮಿಟಿ ಸಭೆ ಮುಕ್ತಾಯವಾಗುತ್ತಿದ್ದಂತೆ ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡಲು ಶ್ರೀರಾಮುಲು ನಿಂತಿದ್ದರು. ಈ ವೇಳೆ ರಾಮುಲು ಅವರನ್ನು ಸಿ.ಟಿ. ರವಿ ಹಾಗೂ ವಿಜಯೇಂದ್ರ ತಡೆದಿದ್ದರು.