ಕೊಲಂಬೊ: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್ (World Cup 2023) ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಟೀಂ ಇಂಡಿಯಾ (Team India) ವಿರುದ್ಧ ಹೀನಾಯ ಸೋಲನುಭವಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಕ್ರೀಡಾ ಸಚಿವ ರೋಶನ್ ರಣಸಿಂಘೆ (Roshan Ranasinghe) ಶ್ರೀಲಂಕಾದ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನೇ ವಜಾಗೊಳಿಸಿದ್ದಾರೆ.
ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿದ ನಂತರ 1996ರಲ್ಲಿ ಶ್ರೀಲಂಕಾ ತಂಡದ ನಾಯಕನಾಗಿ ಏಕದಿನ ವಿಶ್ವಕಪ್ ಗೆದ್ದುಕೊಟ್ಟಿದ್ದ ಅರ್ಜುನ ರಣತುಂಗ (Arjuna Ranatunga) ಅವರನ್ನ ಮಂಡಳಿಯ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದನ್ನೂ ಓದಿ: 49th Century: ಅಭಿಮಾನಿಗಳ ʻವಿರಾಟೋತ್ಸವʼ – ಮುಗಿಲು ಮುಟ್ಟಿದ ಸಂಭ್ರಮ
ಇದೇ ತಿಂಗಳ ನವೆಂಬರ್ 2ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 358 ರನ್ಗಳ ಬೃಹತ್ ಮೊತ್ತದ ಗುರಿ ನೀಡಿತ್ತು. ಆದ್ರೆ ಶ್ರೀಲಂಕಾ (Sri Lanka) ಕೇವಲ 55 ರನ್ಗಳಿಗೆ ಆಲೌಟ್ ಆಗಿ 302ರನ್ ಗಳ ಸೋಲು ಅನುಭವಿಸಿತ್ತು. ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆದ ಏಕದಿನ ಏಷ್ಯಾಕಪ್ ಟೂರ್ನಿಯ ಫೈನಲ್ನಲ್ಲೂ ಶ್ರೀಲಂಕಾ ಕೇವಲ 50 ರನ್ಗಳಿಗೆ ಆಲೌಟ್ ಆಗಿ ತವರಿನಲ್ಲೇ ಮುಖಭಂಗ ಅನುಭವಿತ್ತು.
ಲಂಕಾದ ಈ ಸೋಲಿನಿಂದ ತೀವ್ರ ಸಿಟ್ಟಿಗೆದ್ದ ಕ್ರೀಡಾ ಸಚಿವ ರಣಸಿಂಘೆ, ಇದೊಂದು ದೊಡ್ಡ ಅವಮಾನ ಕೂಡಲೇ ಮಂಡಳಿ ಸದಸ್ಯರು ರಾಜೀನಾಮೆ ಕೊಟ್ಟು ಹೋಗಬೇಕು. ಆಟಗಾರರೂ ಸಹ ನೈತಿಕ ಹೊಣೆಹೊತ್ತು ಸ್ವಯಂ ಪ್ರೇರಿತ ರಾಜೀನಾಮೆ ಸಲ್ಲಿಸಬೇಕು. ಅಲ್ಲದೇ ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳೂ ಸಹ ಈ ಸೋಲಿನ ವಿರುದ್ಧ ಪ್ರತಿಭಟಿಸಿದ್ದರು. ಆದರಿಂದು (ನ.6) ಅಧ್ಯಕ್ಷ ಶಮ್ಮಿ ಸಿಲ್ವಾ ನೇತೃತ್ವದ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳನ್ನು ವಜಾಗೊಳಿಸಿ ಮಧ್ಯಂತರ ಅಧ್ಯಕ್ಷರನ್ನಾಗಿ ಅರ್ಜುನ ರಣತುಂಗ ಅವರಿಗೆ ಅಧಿಕಾರ ನೀಡಲಾಗಿದೆ. ಇದನ್ನೂ ಓದಿ: ಕೊಹ್ಲಿ 49ನೇ ಶತಕವನ್ನು ಚಪ್ಪಾಳೆಯೊಂದಿಗೆ ಸಂಭ್ರಮಿಸಿದ ರೋಹಿತ್ ಶರ್ಮಾ ಪತ್ನಿ ರಿತಿಕಾ
ಸದ್ಯ ಮಾಜಿ ನಾಯಕ ಅರ್ಜುನ ರಣತುಂಗ ಅವರನ್ನು ಮಂಡಳಿಯ ಹಂಗಾಮಿ ಅಧ್ಯಕ್ಷರಾಗಿ ನೇಮಿಸಿರುವುದಾಗಿ ಸಚಿವರು ಆದೇಶದಲ್ಲಿ ತಿಳಿಸಿದ್ದಾರೆ. ಹೊಸದಾಗಿ ರಚಿಸಲಾದ 7 ಸದಸ್ಯರ ಸಮಿತಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ನಿವೃತ್ತ ನ್ಯಾಯಾಧೀಶರು ಮತ್ತು ಮಂಡಳಿಯ ಮಾಜಿ ಅಧ್ಯಕ್ಷ ಉಪಾಲಿ ಧರ್ಮದಾಸ್ ಇದ್ದಾರೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.