ತುಮಕೂರು: ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಬಸವರಾಜು ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವ ಎಸ್.ಆರ್ ಶ್ರೀನಿವಾಸ್ ಅವರು ‘ಸುರೇಶ್ ಗೌಡ ತಿಕ್ಲ..! ಬಸವರಾಜು ಬಾಯಿ ಬಡಕಾ..!’ ಎಂದು ವಾಗ್ದಾಳಿ ನಡೆಸಿದ್ದಾರೆ.
ತುಮಕೂರು ಕ್ಷೇತ್ರದಲ್ಲಿ ಚುಣಾವಣೆ ಕಾವು ಹೆಚ್ಚಳವಾಗುತ್ತಿದಂತೆ ನಾಯಕರ ಆರೋಪ ಪ್ರತ್ಯಾರೋಪ ಹೆಚ್ಚಾಗುತ್ತಿದ್ದು, ಡಿಸಿಎಂ ಪರಮೇಶ್ವರ್ ಅವರು ಭಾಗವಹಿಸಿದ್ದ ಸಭೆಯಲ್ಲಿ ಮಾತನಾಡಿ ಸಚಿವ ಎಸ್.ಆರ್ ಶ್ರೀನಿವಾಸ್ ಎದುರಾಳಿ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಹೇಮಾವತಿ ನೀರಿನ ಬಗ್ಗೆ ಗೊತ್ತಿಲ್ಲದೆ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಸುರೇಶ್ ಗೌಡ ಒಬ್ಬ ತಿಕ್ಲ, ಬಸವರಾಜು ಬಾಯಿ ಬಡಕಾ ಎಂದು ನಿಂದನೆ ಮಾಡಿದರು.
ಇದೇ ವೇಳೆ ಪಕ್ಷದ ನಾಯಕ ಎ.ಕೃಷ್ಣಪ್ಪರ ಸಾವಿಗೆ ನಾನು ಕಾರಣ ಎನ್ನುತ್ತಾರೆ. ಕಳೆದ ಬಾರಿ ಲೋಕಸಭಾ ಜೆ.ಡಿ.ಎಸ್ ಅಭ್ಯರ್ಥಿಯಾಗಿದ್ದ ಎ.ಕೃಷ್ಣಪ್ಪ ಅವರು ಗೊಲ್ಲ ಸಮುದಾಯದ ವ್ಯಕ್ತಿ ಆಗಿದ್ದರಿಂದ ಒಕ್ಕಲಿಗರು ಮತ ಹಾಕಿಲ್ಲ. ಈ ಬಾರಿಯೂ ಅಷ್ಟೇ ಒಕ್ಕಲಿಗರು ಇರುವ ಮತಗಟ್ಟೆಗಳಲ್ಲಿ ಒಂದೇ ಒಂದು ಮತ ಕಾಂಗ್ರೆಸ್ಗೆ ಹೆಚ್ಚು ಬಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಎಸೆದರು.
ಊಟಕ್ಕೆ ಬ್ರೇಕ್: ಇದೇ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಸಮುದಾಯದ ಕಾರ್ಯಕರ್ತರಿಗೆ ಊಟವನ್ನು ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಚುನಾವಣಾ ಅಧಿಕಾರಿಗಳು ಊಟ ವಿತರಣೆ ಮಾಡದಂತೆ ಬ್ರೇಕ್ ಹಾಕಿದರು. ಆದರೆ ಸ್ಥಳದಿಂದ ಅಧಿಕಾರಿಗಳು ತೆರಳುತ್ತಿದಂತೆ ಊಟ ವಿತರಣೆ ಮಾಡಲಾಯಿತು. ಡಿಸಿಎಂ ಜಿ.ಪರಮೇಶ್ವರ್, ಸಚಿವ ಎಸ್.ಆರ್.ಶ್ರೀನಿವಾಸ್ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿತ್ತು.