ಚಿತ್ರದುರ್ಗ: ಚಂದ್ರಗ್ರಹಣದಿಂದಾಗಿ ಶುಭ ಕಾರ್ಯ ಮಾಡಬಾರದು ಎಂದು ಜ್ಯೋತಿಷಿಗಳು ಹೇಳುತ್ತಿದ್ದರೆ, ಕೋಟೆನಾಡು ಚಿತ್ರದುರ್ಗದ ಮುರುಘಾ ಮಠ ಮೂಢನಂಬಿಕೆಯನ್ನು ಧಿಕ್ಕರಿಸುವ ಮೂಲಕ ನವಜೋಡಿಗೆ ವಿವಾಹ ಕಾರ್ಯಕ್ರಮ ಏರ್ಪಡಿಸಿ ವಿಶಿಷ್ಟ ಕಾರ್ಯಕ್ರಮ ನಡೆಸಿದೆ. ಅಲ್ಲದೇ ಇದೇ ವೇಳೆ ನೂರಾರು ಬಾಲಕ, ಬಾಲಕಿಯರು ಹಾಗೂ ಯುವಕರು ಲಿಂಗದೀಕ್ಷೆ ಪಡೆದಿದ್ದಾರೆ.
ಜಿಲ್ಲೆಯ ಜಿಲ್ಲೆಯ ಹಿರಿಯೂರು ತಾಲೂಕಿನ ಹೂವಿನಹೊಳೆಯ ಮರಡಿ ರಂಗಪ್ಪ ನಾಯಕ ಮತ್ತು ವಸಂತಕುಮಾರಿ ಅವರಿಗೆ ಚಂದ್ರಗ್ರಹಣದಂದೇ ಮದುವೆ ಶುಭಕಾರ್ಯ ನಡೆಸಲಾಯಿತು. ಮುರುಘಾಮಠದಲ್ಲಿರುವ ಅಲ್ಲಮ್ಮಪ್ರಭು ಸಂಶೋಧನಾ ಕೇಂದ್ರ ಸಭಾಂಗಣದಲ್ಲಿ ನವಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು. ಉಳಿದಂತೆ ನೂರಾರು ಯುವಕ ಯುವತಿಯರು ವಿಭೂತಿ, ರುದ್ರಾಕ್ಷಿ ಧರಿಸುವ ಮೂಲಕ ಲಿಂಗ ದೀಕ್ಷೆ ಪಡೆದರು.
ಚಂದ್ರಗ್ರಹಣ ಜಗತ್ತಿನ ಅದ್ಭುತ. ಇದು ರಕ್ತ ಚಂದಿರ ಅಲ್ಲ. ಅದ್ಭುತ ಚಂದಿರ. ಮಂಗಳ ಮತ್ತು ಅಮಂಗಳ ಎಂಬುದು ಇಲ್ಲ. ಜಗತ್ತಿನಲ್ಲಿ ಎಲ್ಲವೂ ಶುಭಕರ. ಬ್ರಿಟಿಷರ ದಾಸ್ಯದಿಂದ ಹೊರಗೆ ಬಂದ ನಾವು ಪಂಚಾಂಗದ ದಾಸ್ಯದಲ್ಲಿ ಜೀವಿಸುತ್ತಿದ್ದೇವೆ. ಮುಗ್ಧ ಜನರಿಗೆ ಹಾದಿ ತಪ್ಪಿಸುತ್ತಿರುವ ಕೆಲಸ ನಡೆಯುತ್ತಿದೆ. ಚಂದ್ರ ಗ್ರಹಣದ ಬಗ್ಗೆ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಹೀಗಾಗಿ ಈ ಮೂಲಕ ಜನರ ಭಯವನ್ನು ದೂರ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಡಾ. ಶಿವಮೂರ್ತಿ ಮುರುಘಾ ಶ್ರೀಗಳು ಹೇಳಿದ್ದರು.