ಬೆಳಗಾವಿ: ಒಂದು ವೇಳೆ ಬಾದಾಮಿಯಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಸೋತಿದ್ದರೆ ಅವರ ರಾಜಕೀಯ ಭವಿಷ್ಯ ಏನಾಗುತ್ತಿತ್ತು ಅಂತ ಕಾಂಗ್ರೆಸ್ನವರು ಯೋಚನೆ ಮಾಡಬೇಕಿತ್ತು ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮರುಕ ವ್ಯಕ್ತಪಡಿಸಿದ್ದಾರೆ.
ಚಳಿಗಾಲ ಅಧಿವೇಶನದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸೋತಿದ್ದಕ್ಕೆ ಭಾವನಾತ್ಮಕವಾಗಿ ನನ್ನ ಮನದಾಳದ ಮಾತುಗಳನ್ನು ಹೇಳಿದ್ದು ನಿಜ. ಈಗಲೂ ಹೇಳುತ್ತಿದ್ದೇನೆ, ಅವರ ಸೋಲು ನನಗೆ ನೋವು ತಂದಿದೆ ಎಂದ ಹೇಳಿದರು.
ನನ್ನಿಂದ ಅಧಿಕಾರ ತಪ್ಪಬೇಕು ಅಂತಾ 37 ಸ್ಥಾನವಿದ್ದ ಜೆಡಿಎಸ್ಗೆ ಅಧಿಕಾರ ಕೊಟ್ಟಿರಬಹುದು. ಆದರೆ ಕಾಂಗ್ರೆಸ್ ಶಾಸಕರಲ್ಲಿ ಅತೃಪ್ತಿ ಇದೆ. ಅದು ಯಾವಾಗ ಬೇಕಾದರೂ ಸ್ಫೋಟ ಆಗಬಹುದು ಎಂದು ಹೇಳಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, ನೀವು (ಬಿಜೆಪಿ) ಹಾಗೂ ಅವರು (ಕಾಂಗ್ರೆಸ್- ಜೆಡಿಎಸ್) ಸ್ಫೋಟ ಮಾಡಿಕೊಳ್ಳಿ. ಆದರೆ ಜನರಿಗೆ ಮಾತ್ರ ತೊಂದರೆ ಆಗಬಾರದು ಎಂದು ಸದನದಲ್ಲಿ ಹಾಸ್ಯ ಬೀರಿದರು.
ಈ ಹಿಂದೆ ಬಿಜೆಪಿ 79 ಇದ್ದಾಗ ನಮ್ಮದು 37 ಸ್ಥಾನವಿತ್ತು. ನಮಗೆ ಬಿ.ಎಸ್.ಯಡಿಯೂರಪ್ಪ ಅವರು ಬೆಂಬಲ ಕೊಟ್ಟು ಸರ್ಕಾರ ರಚನೆ ಮಾಡುವಂತೆ ಮಾಡಿದ್ದರು. ಆಗ ಅವರಿಗೆ ಅರಿವಿಗೆ ಬರಲಿಲ್ಲ. ಆದರೆ ಈಗ ಅವರಿಗೆ ಅರಿವಿರಲಿಲ್ವಾ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಇಬ್ಬರ ನಡುವೆ ಮತ್ತೇ ಪ್ರವೇಶ ಮಾಡಿದ ರಮೇಶ್ ಕುಮಾರ್ ಅವರು, ಓಹೋ 37 ಕುಮಾರಸ್ವಾಮಿ ಅವರ ಲಕ್ಕಿ ನಂಬರ್ ಅಂತ ಅನಿಸುತ್ತದೆ ಎಂದು ಹಾಸ್ಯ ಮಾಡಿದರು. ಬಳಿಕ ಯಡಿಯೂರಪ್ಪ ಅವರು ಮಾತನಾಡಿ, ಒಂದು ಸಲ ಕುಮಾರಸ್ವಾಮಿ ಅವರಿಗೆ ಬೆಂಬಲ ಕೊಟ್ಟ ಮೇಲೆ ಕಾಂಗ್ರೆಸ್ನವರು ಬೆಂಬಲ ಕೊಡ್ತಿದ್ದಾರಾ? ಅಭಿವೃದ್ಧಿ ಕೆಲಸ ಆಗ್ತಿದ್ಯಾ? ಈ ಅನಿಷ್ಟ ಸರ್ಕಾರ ತೊಲಗಲಿ ಅಂತಾ ಜನ ಶಾಪ ಹಾಕ್ತಿದ್ದಾರೆ. ನಿಮ್ಮ ಕೈಯಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಕಿಡಿಕಾರಿದರು.
ಈ ವೇಳೆ ಓಹೋ ಡಿ.ಕೆ.ಶಿವಕುಮಾರ್ ಮತ್ತು ನೀವು ಕುಳಿತು ಮಾತನಾಡಿದ್ದು ಇದೇ ವಿಚಾರವೇ ಎಂದು ಯಡಿಯೂರಪ್ಪ ಅವರನ್ನು ಮತ್ತೆ ಸ್ಪೀಕರ್ ಕಾಲೆಳೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv