ಬೆಳಗಾವಿ: ಬಿಜೆಪಿ ಶಾಸಕ ರಾಜುಗೌಡ ಹಾಗೂ ಮಾಜಿ ಸಚಿವ ಉಮೇಶ್ ಕತ್ತಿ ಅವರನ್ನು ವಿಶೇಷ ಹೆಸರಿನ ಮೂಲಕ ಕರೆದು ಅಧಿವೇಶನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ನಗೆ ಹರಿಸಿದ್ದಾರೆ.
ಅಧಿವೇಶನದಲ್ಲಿ ಇಂದು ಬೆಳಗ್ಗೆ ಆರಂಭವಾಗಿದ್ದ ಪ್ರಶ್ನೋತ್ತರ ಕಲಾಪದ ವೇಳೆ ಒಬ್ಬೊಬ್ಬ ಶಾಸಕರ ಪ್ರಶ್ನೆಗಳನ್ನು ಆಲಿಸಿ ಸಂಬಂಧಪಟ್ಟ ಸಚಿವರಿಂದ ಸ್ಪೀಕರ್ ಉತ್ತರ ಕೊಡಿಸುತ್ತಿದ್ದರು. ಈ ವೇಳೆ ಬಿಜೆಪಿ ಶಾಸಕ ರಾಜೂ ಗೌಡ ಅವರನ್ನು ಹೆಲಿಕಾಪ್ಟರ್ ಗೌಡ ಎಂದು ಸ್ಪೀಕರ್ ಕರೆದರು. ನಗುತ್ತಲೇ ರಾಜೂ ಗೌಡ ಎದ್ದು ನಿಂತು ಮಾತನಾಡುತ್ತಿದ್ದಾಗ ಹೆಲಿಕಾಪ್ಟರ್ ಬಂತಾ ಎಂದು ಮತ್ತೊಮ್ಮೆ ಕೇಳಿದ ಸಭೆಯಲ್ಲಿ ಎಲ್ಲರ ಮುಖದಲ್ಲಿಯೂ ನಗೆ ಬೀರಿದರು.
ಯುಕೆ ಟ್ವೆಂಟಿಸೆವೆನ್ ಅವರು ತಮ್ಮ ಪ್ರಶ್ನೆ ಕೇಳಬಹುದು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳುತ್ತಿದ್ದಂತೆ ಯಾರನ್ನು ಉದ್ದೇಶಿಸಿ ಕರೆದಿದ್ದಾರೆ ಎನ್ನುವ ಬಗ್ಗೆ ಸ್ವಲ್ಪಹೊತ್ತು ಗೊಂದಲ ಉಂಟಾಗಿತ್ತು. ರೀ ನಾನು ಕರೆದಿದ್ದು, ಆತ್ಮೀಯ ಹಾಗೂ ಸಹೋದ್ಯೋಗಿಯಾದ ಮಾಜಿ ಸಚಿವ ಉಮೇಶ್ ಕತ್ತಿ ಅವರನ್ನು ಅಂತ ಹೇಳಿದರು. ಹಾಗೇ ಹೇಳುತ್ತಿದ್ದಂತೆ ಸದನದಲ್ಲಿದ್ದ ಎಲ್ಲರೂ ನಕ್ಕುಬಿಟ್ಟರು.
ಈಗಾಗಲೇ ನನ್ನ ಪ್ರಶ್ನೆ ಉತ್ತರ ಕೊಟ್ಟಿದ್ದಾರೆ ಎಂದು ಉಮೇಶ್ ಕತ್ತಿ ಅವರು ಹೇಳುತ್ತಿದ್ದಂತೆ, ಬಹಳ ಚೆನ್ನಾಗಿದೆಯಂತೆ ಟ್ವೆಂಟಿಸೆವನ್ ಎಂದು ಹೇಳಿ ಮತ್ತೊಮ್ಮೆ ಸ್ಪೀಕರ್ ಕಾಲೆಳೆದರು. ನಮ್ಮ ಭಾಗದ ಕಾಲೇಜುಗಳ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಉಮೇಶ್ ಕತ್ತಿ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್ ಅವರು, ರೀ ಕಾಲೇಜುಗಳನ್ನು ಎಲ್ಲದ್ರೂ ಶುಗರ್ ಫ್ಯಾಕ್ಟರಿಯಲ್ಲಿ ತೆರೆದು ಬಿಟ್ಟೀರಾ ಎಂದು ಚಟಾಕಿ ಹಾರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv