ಬೆಂಗಳೂರು: ಇಂದು ಸಂಜೆ 6 ಗಂಟೆಯ ಒಳಗಡೆ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರದ ನಿರ್ಧಾರ ತಿಳಿಸಲು ಸಾಧ್ಯವಿಲ್ಲ ಎಂದು ಹೇಳಿ ಸ್ಪೀಕರ್ ರಮೇಶ್ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಈಗ ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಸ್ಪೀಕರ್, ನನಗೆ ಆದೇಶ ನೀಡಲು ನ್ಯಾಯಾಲಯಗಳಿಗೆ ಆದೇಶವಿಲ್ಲ. ನಾನು ನಿಯಮಗಳ ಪ್ರಕಾರವೇ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಹೇಳಿ ಸುಪ್ರೀಂ ಮೆಟ್ಟಿಲೇರಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಇಂದು ತುರ್ತು ವಿಚಾರಣೆ ನಡೆಸುವುದಿಲ್ಲ. ಶುಕ್ರವಾರ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದೆ.
ಸ್ಪೀಕರ್ ವಾದವೇನು?
ಸ್ಪೀಕರ್ ಆಗಿರುವ ನನಗೆ ಗಡುವು ಕೊಟ್ಟು ನೀವು ಆದೇಶ ಕೊಡಲು ಬರುವುದಿಲ್ಲ. ಸ್ಪೀಕರ್ ಆಗಿ ನನಗೆ ಸಾಂವಿಧಾನಿಕ ಕರ್ತವ್ಯಗಳಿದ್ದು, ಸಾಂವಿಧಾನಿಕ ಮತ್ತು ವಿಧಾನಸಭೆಯ ನಿಯಮಗಳನ್ನು ಪಾಲಿಸಲೇಬೇಕಿದೆ. ಶಾಸಕರ ರಾಜೀನಾಮೆ ಸ್ವಯಂಪ್ರೇರಿತವೋ? ಬಲವಂತವೋ ಎಂಬ ಬಗ್ಗೆ ಪರಿಶೀಲಿಸಬೇಕಿದೆ. ಅತೃಪ್ತ ಶಾಸಕರ ವಿರುದ್ಧ ಸಲ್ಲಿಕೆಯಾಗಿರುವ ಅನರ್ಹತೆ ಅರ್ಜಿಯ ಪರಿಶೀಲನೆ ಕೆಲಸ ಬಾಕಿ ಇದೆ. ಹೀಗಾಗಿ ಅನರ್ಹತೆಯ ಅರ್ಜಿ ಪರಿಶೀಲನೆ ಸಮಯವಕಾಶ ಬೇಕಾಗುತ್ತದೆ. ಹೀಗಾಗಿ ಅತೃಪ್ತರ ರಾಜೀನಾಮೆಯ ಬಗ್ಗೆ ಏಕಾಏಕಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.
ಸುಪ್ರೀಂ ಹೇಳಿದ್ದೇನು?
ನಿಮ್ಮ ಅರ್ಜಿಯ್ನು ಈ ಕ್ಷಣವೇ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಶಾಸಕರ ರಾಜೀನಾಮೆ ಪರಿಶೀಲನೆ ಸಂಬಂಧ ನಾವು ಬೆಳಗ್ಗೆ ಆದೇಶ ಕೊಟ್ಟಿದ್ದೇವೆ. ಹಾಗಾಗಿ ಶಾಸಕರ ರಾಜೀನಾಮೆಯ ಬಗ್ಗೆ ನಿರ್ಧಾರ ಕೈಗೊಳ್ಳುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ನಾಳೆ (ಶುಕ್ರವಾರ) ಅತೃಪ್ತ ಶಾಸಕರ ಅರ್ಜಿಯ ಜೊತೆಗೆ ನಿಮ್ಮ ವಾದವನ್ನು ಆಲಿಸುತ್ತೇವೆ.
Supreme Court said, 'In the morning we have fixed the matter for hearing tomorrow'. https://t.co/QbJ6igQ6lq
— ANI (@ANI) July 11, 2019
ಸುಪ್ರೀಂ ಆದೇಶ ಏನು?
ಅತೃಪ್ತ ಶಾಸಕರು ಸ್ಪೀಕರ್ ಅವರನ್ನು ಇಂದು ಸಂಜೆ 6 ಗಂಟೆಯೊಳಗೆ ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಬೇಕು. ಅಲ್ಲದೆ ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ರಾಜೀನಾಮೆ ಕುರಿತು ಇಂದೇ ನಿರ್ಧಾರ ಕೈಗೊಳ್ಳಬೇಕು. ಆ ನಿರ್ಧಾರವನ್ನು ನಾಳೆ ತನಗೆ ತಿಳಿಸಬೇಕು.