– ‘ಮಹಾ’ ರಾಜ್ಯಪಾಲರ ವಿರುದ್ಧ ದೀದಿ ಕಿಡಿ
ಕೋಲತ್ತಾ: ಕೆಲವರು ಬಿಜೆಪಿ ಮುಖವಾಣಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪರೋಕ್ಷವಾಗಿ ಮಹಾರಾಷ್ಟ್ರ ರಾಜ್ಯಪಾಲರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಕೋಲ್ಕತ್ತಾದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಸಂಬಂಧ ಅಲ್ಲಿನ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಬಗ್ಗೆ ಕಿಡಿಕಾರಿದ್ದಾರೆ. ‘ಕೆಲವು ನಾಮನಿರ್ದೇಶಿತ ವ್ಯಕ್ತಿಗಳು ತಮ್ಮ ಗಡಿಯನ್ನು ಮೀರಿದ್ದಾರೆ. ಅವರ ನಡೆ ಕೇಂದ್ರ ಸರ್ಕಾರವನ್ನು ಮೀರಿಸಬಾರದು. ಈ ಬಗ್ಗೆ ಕೇಂದ್ರ ಎಚ್ಚರವಹಿಸಬೇಕು’ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ನಾನು ಸಾಂವಿಧಾನಿಕ ಹುದ್ದೆಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಕೆಲವು ಜನರು (ರಾಜ್ಯಪಾಲರು) ಬಿಜೆಪಿ ಮುಖವಾಣಿಗಳಂತೆ ವರ್ತಿಸುತ್ತಿದ್ದಾರೆ. ನನ್ನ ರಾಜ್ಯದಲ್ಲೂ ಏನು ನಡೆಯುತ್ತಿದೆ ಎಂಬುದನ್ನು ನೀವು ನೋಡಿದ್ದೀರಿ. ಅವರು ಸಂಯುಕ್ತ ಆಡಳಿತವನ್ನು ನಡೆಸಲು ಬಯಸುತ್ತಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.
ಮಹಾರಾಷ್ಟ್ರಾದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಕೇಂದ್ರ ಸರ್ಕಾರಕ್ಕೆ ಮಂಗಳವಾರ ನೀಡಿದ್ದ ವರದಿ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಆಡಳಿತ ಹೇರಲಾಯಿತು. ಇತ್ತ 2019ರ ಜುಲೈ ಅಂತ್ಯದಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಅವರು ಆಡಳಿತರೂಢ ತೃಣಮೂಲ ಕಾಂಗ್ರೆಸ್ ಜೊತೆ ವಿವಿಧ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಈ ವಿಚಾರವಾಗಿ ಮಮತಾ ಬ್ಯಾನರ್ಜಿ ಅಸಮಾಧಾನ ಹೊರಹಾಕಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತಂದ ವಿಚಾರವಾಗಿ ಬುಧವಾರ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಅಮಿತ್ ಶಾ, ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯಪಾಲರು ಎಲ್ಲ ಪಕ್ಷಗಳಿಗೂ 18 ದಿನದ ಅವಕಾಶ ನೀಡಿದ್ದರು. ಆದರೆ ಯಾವ ಪಕ್ಷವೂ ಸರ್ಕಾರ ರಚನೆಗೆ ಮುಂದಾಗಲಿಲ್ಲ. ವಿಧಾನಸಭಾ ಅವಧಿ ಅಂತ್ಯವಾಗಲು ಬಂದಾಗ ರಾಜ್ಯಪಾಲರು ಪಕ್ಷಗಳಿಗೆ ಸರ್ಕಾರ ರಚಿಸುವಂತೆ ಪ್ರತಿ ಪಕ್ಷಗಳಿಗೆ ಪತ್ರ ಬರೆದು ಆಹ್ವಾನಿಸಿದರು. ಬಿಜೆಪಿ, ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಯಾರು ಸರ್ಕಾರ ರಚನೆ ಮಾಡದಿದ್ದಾಗ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆ ಶಿಫಾರಸ್ಸು ಮಾಡಿದ್ದಾರೆ. ಇವಾಗಲೂ ಸಹ ಯಾರ ಬಳಿ ಬಹುಮತವಿದ್ದರೆ ರಾಜ್ಯಪಾಲರನ್ನು ಸಂಪರ್ಕಿಸಿ ಸರ್ಕಾರ ರಚಿಸುವ ಅವಕಾಶಗಳಿವೆ ಎಂದು ತಿಳಿಸಿದ್ದರು.
ರಾಜ್ಯಪಾಲರು ಎಲ್ಲರಿಗೂ ಸಮಾನ ಅವಕಾಶ ನೀಡಿದ್ದಾರೆ. ವಿಪಕ್ಷಗಳು ಸರ್ಕಾರ ರಚಿಸುವದರಲ್ಲಿ ರಾಜಕೀಯ ಮಾಡುತ್ತಿದ್ದು, ಜನರಿಗೆ ತಪ್ಪು ಸಂದೇಶವನ್ನ ರವಾನಿಸುವ ಕೆಲಸ ಮಾಡುತ್ತಿವೆ. ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವ ಮೂಲಕ ರಾಜ್ಯಪಾಲರು ಸರ್ಕಾರ ರಚನೆ ಮಾಡುವವರಿಗೆ ಆರು ತಿಂಗಳ ಅವಕಾಶ ನೀಡಿದ್ದಾರೆ. ಸಂಖ್ಯೆ ತೋರಿಸಲು ಇವತ್ತು ಸಹ ಅವಕಾಶಗಳು ನಮ್ಮೆಲ್ಲರ ಮುಂದಿವೆ. ರಾಜ್ಯಪಾಲರು ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿಲ್ಲ ಎಂದು ಶಿವಸೇನೆ ಆರೋಪಕ್ಕೆ ತಿರುಗೇಟು ನೀಡಿದ್ದರು.