ಶಿವಮೊಗ್ಗ: ಕೆಲವೇ ಕೆಲವು ಮುಸ್ಲಿಮರು ಶಿವಮೊಗ್ಗವನ್ನು ಹಾಳು ಮಾಡುತ್ತಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ (K.S Eshwarappa) ಆಕ್ರೋಶ ಹೊರಹಾಕಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಮುಸಲ್ಮಾನ್ ಗೂಂಡಾಗಳಿಗೆ ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ಹಾಗೂ ಸರ್ಕಾರದ ಭಯ ಇಲ್ಲ. ಹರ್ಷನ ಕೊಲೆ ನಂತರ ಎನ್ಐಎ (NIA) ಗೆ ವಹಿಸಿದ ನಂತರ ಸಾಕಷ್ಟು ಪ್ರಕರಣ ಬೆಳಕಿಗೆ ಬಂದಿದೆ ಎಂದರು.
ಲಾಂಗ್, ಮಚ್ಚು ಬಳಸಿಲ್ಲ, ಕಲ್ಲಿನಿಂದ ಹೊಡೆದಿದ್ದಾರೆ. ಪಿಎಫ್ ಐ (PFI) ಸಂಘಟನೆ ಕೈವಾಡ ಇದೆಯೋ, ಅಥವಾ ಬೇರೆ ಗೂಂಡಾಗಳ ಕೈವಾಡ ಇದೆಯೋ ಎಂಬುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ. ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳಬೇಕು. ಸರ್ಕಾರ ಹೆಚ್ಚಿನ ಕ್ರಮ ವಹಿಸಬೇಕು ಎಂದು ಸಚಿವರು ಒತ್ತಾಯಿಸಿದರು.
ಶಿವಮೊಗ್ಗದಲ್ಲಿ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿತ್ತು. ಸಾವಿರಾರು ಮಂದಿ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಆದರೆ ಯಾರೂ ಕೂಡಾ ಉತ್ತೇಜನ ಕೊಡುವಂತಹ ಮಾತು ಆಡಿಲ್ಲ ಎಂದರು. ಇದನ್ನೂ ಓದಿ: ಶಿವಮೊಗ್ಗ ಮತ್ತೆ ಉದ್ವಿಗ್ನ – ಹರ್ಷನ ಮನೆ ಮುಂದೆ ಲಾಂಗು, ಮಚ್ಚು ಹಿಡಿದು ಓಡಾಟ
ಶಿವಮೊಗ್ಗದಲ್ಲಿ ನಡೆದ ಘಟನೆ ಬಗ್ಗೆ ಪೊಲೀಸರು ಬಿಗಿ ಕ್ರಮ ಕೈಗೊಳ್ಳಬೇಕು. ಹಿಂದೂ ಅಂತಾ ಗಮನಿಸಿ ಪ್ರಕಾಶ್ ಮೇಲೆ ಹಲ್ಲೆ ನಡೆದಿದೆ. ಶಿವಮೊಗ್ಗದಲ್ಲಿ ಪಿಎಫ್ ಐ ಸಂಘಟನೆ ಇನ್ನೂ ಜೀವಂತವಾಗಿ ಇದೆಯೋ ಇಲ್ಲವೋ ಎಂಬುದನ್ನು ಪೊಲೀಸರು ಗಮನಿಸಬೇಕು. ಮುಸಲ್ಮಾನ ಹಿರಿಯರು ಅವರ ಮಕ್ಕಳಿಗೆ ಬುದ್ಧಿ ಹೇಳಬೇಕು. ರಾಷ್ಟ್ರ ದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸದಂತೆ ತಿಳಿ ಹೇಳಬೇಕು. ನೀವು ಬುದ್ಧಿ ಹೇಳದಿದ್ದರೆ ಅರೆಸ್ಟ್ ಆಗ್ತಾರೆ. ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ ಹಿಂದುತ್ವ ಜಾಗೃತಿ ಆಗಿರೋದು ಕಂಡು ಸಹಿಸದೇ ಇಂತಹ ದುಷ್ಕೃತ್ಯ ನಡೆಸಿದ್ದಾರೆ. ಹಿಂದೂ ಸಮಾಜದಲ್ಲಿ ಇಂತಹ ದುಷ್ಕೃತ್ಯ ನಡೆದಿಲ್ಲ. ಮುಸಲ್ಮಾನ ಗೂಂಡಾಗಳೇ ಇಂತಹ ಕೆಲಸ ಮಾಡ್ತಿದ್ದಾರೆ. ಹರ್ಷನ ಮನೆ ಬಳಿ ಹೋಗಿ ಬೆದರಿಕೆ ಹಾಕಿದವರ ಬಂಧಿಸಬೇಕು. ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹರ್ಷನ ಕೊಲೆ ನಂತರ ಇಂತಹ ಘಟನೆ ಕಡಿಮೆಯಾಗಿತ್ತು. ಆದರೆ ನಿನ್ನೆ ಮತ್ತೆ ಘಟನೆ ನಡೆದಿದೆ ಎಂದರು. ಇದನ್ನೂ ಓದಿ: ದುಷ್ಕರ್ಮಿಗಳಿಂದ ಭಯ ಹುಟ್ಟಿಸೋ ಪ್ರಕರಣ- ನಮಗೆ ಸೂಕ್ತ ರಕ್ಷಣೆ ಬೇಕು: ಹರ್ಷ ಸಹೋದರಿ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ ಹಾಳು ಮಾಡಬೇಕು ಎಂಬುದನ್ನು ಕೆಲವೇ ಮುಸಲ್ಮಾನರು ಮಾಡ್ತಿದ್ದಾರೆ. ಇಂತಹ ಘಟನೆ ನಡೆದಾಗ ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷದವರು ಬಾಯಿ ಬಿಡೋದೇ ಇಲ್ಲ. ನಮ್ಮ ಜೊತೆ ಕಾಂಗ್ರೆಸ್ ಇದೆ ಎಂಬ ಮನೋಭಾವನೆ ಮುಸಲ್ಮಾನ ಗೂಂಡಾಗಳಿಗಿದೆ ಎಂದು ಹೇಳಿದರು.