ಬಳ್ಳಾರಿ: ನಾನು ಸಾಯುವಾಗ ಒಂದು ಕಿವಿಯಲ್ಲಿ ವರನಟ ಡಾ.ರಾಜಕುಮಾರ್ ಅಭಿನಯದ ಗಂಧದಗುಡಿ ಹಾಡು ಕೇಳಿಸಬೇಕು. ಇನ್ನೊಂದು ಕಿವಿಯಲ್ಲಿ ಹನುಮಾನ್ ಚಾಲೀಸಾ ಕೇಳಿಸಬೇಕು ಎಂದು ಈಗಾಗಲೇ ನನ್ನ ಮಗನಿಗೆ ಹೇಳಿರುವುದಾಗಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೆಡ್ಡಿಗಳು ಎಂದರೇ ನಾವು ಪಕ್ಕದ ಆಂಧ್ರ ಪ್ರದೇಶದವರು ಎಂದು ಕೆಲವರು ಹೇಳುತ್ತಾರೆ. ಆದರೆ ನಾನು ಅಪಟ್ಟ ಕನ್ನಡಿಗ. ನಾನು ಇದೇ ನೆಲದಲ್ಲಿ ಹುಟ್ಟಿದವ. ನಾನು ಈ ನಾಡು ನುಡಿಯನ್ನು ಪ್ರೀತಿಸುವೆ ಎಂದಿದ್ದಾರೆ.
ನಮ್ಮ ತಂದೆ ಪೊಲೀಸ್ ಕೆಲಸದಲ್ಲಿ ಇದ್ದರು. ಆಗ ನಾವು ಬಳ್ಳಾರಿಗೆ ಬಂದೇವೂ. ನಮ್ಮ ತಂದೆ ನಿವೃತ್ತಿ ಬಳಿಕ ನಮ್ಮ ತಂದೆ ಆಂಧ್ರಪ್ರದೇಶದಕ್ಕೆ ಹೋಗೋಣ ಎಂದರು. ಆದರೆ ನಮ್ಮ ತಾಯಿಯವರು ಬಳ್ಳಾರಿಯಲ್ಲಿಯೇ ನಾವು ಇರಬೇಕು ಎಂದು ಹಟ ಹಿಡಿದರು. ಆದ್ದರಿಂದ ನಾವು ಬಳ್ಳಾರಿಯಲ್ಲಿ ಉಳಿದೆವು. ನಾವು ಆಂಧ್ರ ಪ್ರದೇಶದವರಲ್ಲಾ, ಅಪ್ಪಟ ಕನ್ನಡಿಗ. ನಾನು 10 ವರ್ಷ ಆಂಧ್ರಪ್ರದೇಶದಲ್ಲಿದ್ದ ಸಂದರ್ಭದಲ್ಲಿ ಮೊದಲು ನೋಡಿದ ಸಿನಿಮಾ ಗಂಧದ ಗುಡಿ. ನಾನು ಎಲ್ಲೇ ಹೋದರೂ 2-3 ದಿನಗಳಲ್ಲಿ ವಾಪಸ್ ಬಳ್ಳಾರಿಗೆ ಹೋಗೋಣ ಎನಿಸುತ್ತದೆ ಎಂದರು ತಿಳಿಸಿದರು.
ಕೆಲವರು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಆದರೆ ಈ ಬಗ್ಗೆ ನೀವು ತಲೆ ಕೆಡಿಸಿಕೊಳ್ಳ ಬೇಡಿ. ನಾವು ಆಂಧ್ರ ರೆಡ್ಡಿಗಳು ಅಲ್ಲ, ಕರ್ನಾಟಕದ ರೆಡ್ಡಿಗಳು. ನಮ್ಮ ಗಡಿ ಜಿಲ್ಲೆ ಬೆಳಗಾವಿ ಬಗ್ಗೆ ಮಹಾರಾಷ್ಟ್ರ ತಂಟೆ ತೆಗೆಯುತ್ತಿದೆ. ಅವರಿಗೆ ನಾವು ತಕ್ಕ ಪಾಠ ಕಲಿಸಬೇಕು. ಯಾವುದೇ ಕಾರಣಕ್ಕೂ ಬೆಳಗಾವಿಯನ್ನು ಬಿಟ್ಟು ಕೊಡುವ ಮಾತೇ ಇಲ್ಲ. ಈ ಬಗ್ಗೆ ಹೋರಾಟಕ್ಕೂ ನಾನು ಸಿದ್ಧ ಎಂದು ತಿಳಿಸಿದರು.