ಗದಗ: ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಯೋಧನ ಕುಟುಂಬವನ್ನು ರಕ್ಷಣೆ ಮಾಡಲಾಗಿದೆ.
ಯೋಧ ಈರಪ್ಪ ಹಡಪದ ಅವರು ಜಮ್ಮು- ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಪತಿ ಈರಪ್ಪ ಅವರು ಕಳೆದ 20 ದಿನಗಳಿಂದ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಕಾರಣದಿಂದಾಗಿ ನಾವು ಜಲಪ್ರಳಯಕ್ಕೆ ತುತ್ತಾಗಿರುವ ವಿಚಾರ ಅವರಿಗೆ ಗೊತ್ತಿಲ್ಲ ಎಂದು ಪತ್ನಿ ಜಯಲಕ್ಷ್ಮಿ ತಿಳಿಸಿದ್ದಾರೆ.
ಯೋಧ ಈರಪ್ಪ ಅವರ ಪತ್ನಿ ಜಯಲಕ್ಷ್ಮಿ ಅವರು ತಮ್ಮ ಬಾಣಂತಿ ಮಗಳು, ಇಬ್ಬರು ಗಂಡು ಮಕ್ಕಳ ಜೊತೆ ಪ್ರವಾಹಕ್ಕೆ ಸಿಲುಕಿ ಪರದಾಡುತ್ತಿದ್ದಾರೆ. ಸದ್ಯ ಈಗ ಈರಪ್ಪ ಅವರ ಕುಟುಂಬಸ್ಥರು ಆಸರೆ ಯೋಜನೆ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಈ ನಡುವೆ ಮನೆ ಖಾಲಿ ಮಾಡುವಂತೆ ಯೋಧನ ಕುಟುಂಬಕ್ಕೆ ಮೂಲ ಮನೆ ಮಾಲೀಕರು ಕಿರಿಕಿರಿ ಮಾಡುತ್ತಿದ್ದಾರೆ. ಇದರಿಂದಾಗಿ ಯೋಧನ ಕುಟುಂಬ ಕಂಗಾಲಾಗಿದೆ. ದೇಶ ಕಾಯುವವರ ಕುಟುಂಬಕ್ಕೆ ಕೇಳೋರೋ ದಿಕ್ಕಿಲ್ಲ ಎಂದು ಕುಟುಂಬಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.