ಚಿಕ್ಕಮಗಳೂರು: ಹಾವು ಕಪ್ಪೆ ನುಂಗಿ ಭಯದಿಂದ ಆ್ಯಕ್ಟೀವ್ ಹೊಂಡ ಸ್ಕೂಟಿಯೊಳಗೆ ಸೇರಿಕೊಂಡು ಸುಮಾರು ಒಂದು ಗಂಟೆಗಳ ಕಾಲ ಮನೆಯವರು ಹಾಗೂ ಉರಗ ತಜ್ಞನನ್ನ ಸತಾಯಿಸಿರುವ ಘಟನೆ ಚಿಕ್ಕಮಗಳೂರಿನ ಕಲ್ಯಾಣ ನಗರದ ಪುಷ್ಪಗಿರಿ ಲೇಔಟ್ನಲ್ಲಿ ನಡೆದಿದೆ.
ಸಬ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಅವರ ಪತ್ನಿ ತಮ್ಮ ಸ್ಕೂಟಿ ಮನೆ ಮುಂದೆ ನಿಲ್ಲಿಸಿದ್ದರು. ಸ್ಕೂಟಿ ನಿಲ್ಲಿಸಿದ ಪಕ್ಕದಲ್ಲಿದ್ದ ಮೂರು ಕಪ್ಪೆಗಳಲ್ಲಿ ಒಂದನ್ನ ಹಾವು ನುಂಗಿದೆ. ಹಾವು ಕಪ್ಪೆಯನ್ನ ನುಂಗುವುದನ್ನು ಮನೆಯವರು ನೋಡಿ ಕೂಗಿಕೊಂಡು ಮನೆಯೊಳಗೆ ಹೋಗಿ ಬರುವಷ್ಟರಲ್ಲಿ ಹಾವು ಸ್ಕೂಟಿಯ ಹೆಡ್ಲೈಟ್ ಸೇರಿದೆ.
ತಕ್ಷಣ ಮನೆಯವರು ಉರಗ ತಜ್ಞ ನರೇಶ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಹರಸಾಹಸ ಪಟ್ಟರು ಹಾವನ್ನ ತೆಗೆಯಲು ಸಾಧ್ಯವಾಗಲಿಲ್ಲ. ಸ್ಕೂಟಿಯ ಡೂಮ್ ಬಿಚ್ಚಲು ಮೆಕಾನಿಕ್ಗೆ ಕಾಲ್ ಮಾಡಿದ್ರೆ, ಆತ ಭಯ ಆಗುತ್ತೆ ಬಿಚ್ಚಲ್ಲ ಎಂದು ಬರಲಿಲ್ಲ.
ಕೊನೆಗೆ ಸ್ನೇಕ್ ನರೇಶ್ ಸ್ಕೂಟಿಯನ್ನ ನಿರ್ಜನ ಪ್ರದೇಶಕ್ಕೆ ತಂದು ಮೋಟರ್ ಆನ್ ಮಾಡಿಕೊಂಡು ವೇಗವಾಗಿ ನೀರನ್ನ ಬಿಟ್ಟಿದ್ದಾರೆ. ಆಗ ಒಳಗಿದ್ದ ನಾಗರಹಾವು ಹೊರ ಬಂದಿದೆ. ತದನಂತರ ಹಾವನ್ನ ಸೆರೆ ಹಿಡಿದ ನರೇಶ್ ಹಾವನ್ನು ಸ್ಥಳೀಯ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.