ಉಡುಪಿ: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (SM Krishna) ನಿಧನಕ್ಕೆ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Tirtha Swamiji) ಸಂತಾಪ ವ್ಯಕ್ತಪಡಿಸಿದರು. ಎಸ್ಎಂ ಕೃಷ್ಣ ವಿಧಿವಶವಾದ ಸುದ್ದಿ ತಿಳಿದು ಖೇದವಾಗಿದೆ. ಎಸ್ಎಂ ಕೃಷ್ಣ ರಾಜ್ಯ ಮತ್ತು ದೇಶಕ್ಕೆ ಉತ್ತಮ ಮಾರ್ಗದರ್ಶನ ಮಾಡಿದವರು ಎಂದು ಸ್ವಾಮೀಜಿ ನೆನಪಿಸಿಕೊಂಡಿದ್ದಾರೆ.
ಪೇಜಾವರ ಮಠ ಮತ್ತು ನಮ್ಮ ಗುರುಗಳ ಮೇಲೆ ಅವರಿಗೆ ವಿಶೇಷ ಅಭಿಮಾನ ಇತ್ತು. ಭಗವಂತ ಅವರ ಆತ್ಮಕ್ಕೆ ಸಕಲ ಬಗೆಯ ಶ್ರೇಯಸ್ಸು ಕರುಣಿಸಲಿ. ಕುಟುಂಬಕ್ಕೆ ವಿಯೋಗ ಸಹಿಸುವ ಸಾಮರ್ಥ್ಯ ಕೊಡಲಿ. ರಾಜಕಾರಣದಲ್ಲಿ ತಳಮಟ್ಟದಿಂದ ಬಹಳ ಎತ್ತರದವರೆಗೆ ಬೆಳೆದು ಅನೇಕ ಮಹತ್ವದ ಸ್ಥಾನಮಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅನನ್ಯತೆಯನ್ನು ಕೃಷ್ಣ ಅವರು ಸಂಪಾದಿಸಿದ್ದು ಉಲ್ಲೇಖನೀಯ ಎಂದರು. ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿದ ಬಸ್ – 6 ಮಂದಿ ಸಾವು, 49 ಮಂದಿಗೆ ಗಾಯ
ರಾಜ್ಯದ ಮುಖ್ಯಮಂತ್ರಿಯಾಗಿಯೂ ಉತ್ತಮ ಕಾರ್ಯನಿರ್ವಹಿಸಿದ್ದು, ಬೆಂಗಳೂರನ್ನು ಮಾಹಿತಿ ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿ ಬೆಳೆಸಿ ಸಾವಿರಾರು ಪ್ರತಿಭಾವಂತ ಯುವಕರಿಗೆ ಉದ್ಯೋಗ ದೊರೆಯುವಂತೆ ಮಾಡಿ ಜೀವನದ ದಾರಿಯನ್ನು ತೆರೆದಿಡುವಲ್ಲಿ ಅವರ ದೂರದೃಷ್ಟಿಯ ಪಾತ್ರ ಸದಾ ಸ್ಮರಣೀಯ. ಸಜ್ಜನಿಕೆ, ಸಭ್ಯತೆ, ಸದಾಚಾರ ಮತ್ತು ಧರ್ಮ ಸಂಪನ್ನರೂ ಆಗಿದ್ದು, ಶ್ರೀಮಠದ ಹಾಗೂ ನಮ್ಮ ಗುರುಗಳ ವಿಶೇಷ ಭಕ್ತರಾಗಿದ್ದರು. ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಪಂಚಮ ಶ್ರೀಕೃಷ್ಣ ಪರ್ಯಾಯದ ಸಂದರ್ಭದಲ್ಲಿ ರಾಷ್ಟ್ರರತ್ನ ಬಿರುದಿನೊಂದಿಗೆ ಸನ್ಮಾನಿಸಿದ್ದನ್ನು ಸ್ಮರಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ -ಹೋರಾಟಗಾರರ ಮೇಲೆ ಲಾಠಿಚಾರ್ಜ್
ಗುರುಗಳ ಬಳಿಕ ನಮ್ಮ ಮೇಲೂ ಅದೇ ಅಭಿಮಾನ, ಭಕ್ತಿ ಹಾಗೂ ಪ್ರೀತಿಯನ್ನು ಹೊಂದಿದ್ದ ಕೃಷ್ಣ ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಎಂದು ಸ್ವಾಮೀಜಿ ಪ್ರಕಟಣೆ ಮೂಲಕ ಪ್ರಾರ್ಥಿಸಿದ್ದಾರೆ. ಕುಟುಂಬಕ್ಕೂ ಅವರ ವಿಯೋಗದ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಶ್ರೀ ಕೃಷ್ಣಪರಮಾತ್ಮನಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಸ್ಎಂ ಕೃಷ್ಣ ಆಡಳಿತದಲ್ಲಿ ವಿಕಾಸಸೌಧ ನಿರ್ಮಾಣ: ಗೋವಿಂದ ಕಾರಜೋಳ