ಚಿಕ್ಕಬಳ್ಳಾಪುರ: ಭೂಮಿ ಮೇಲಿನ ಸ್ವರ್ಗತಾಣ, ಪ್ರವಾಸಿಗರ ಪಾಲಿನ ಹಾಟ್ ಫೇವರಿಟ್ ತಾಣ ಚಿಕ್ಕಬಳ್ಳಾಪುರ ತಾಲೂಕಿನ ಸ್ಕಂದಗಿರಿ ಬೆಟ್ಟಕ್ಕೆ ಚಾರಣಿಗರ ದಂಡೇ ಹರಿದು ಬಂದಿದೆ. ಮುಂಜಾನೆ 3-4 ಗಂಟೆಗೆ ಸಾವಿರಾರು ಮಂದಿ ಚಾರಣಿಗರು ಸ್ಕಂದಗಿರಿ ಬೆಟ್ಟಕ್ಕೆ ಲಗ್ಗೆಯಿಟ್ಟಿದ್ದು, ವೀಕೆಂಡ್ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಚಾರಣಿಗರ ಆಗಮನ ಹಿನ್ನೆಲೆ ಟಿಕೆಟ್ ಪಡೆಯಲು ಪ್ರವಾಸಿಗರು ಪರದಾಡುವಂತಾಗಿದೆ.
ಸ್ಕಂದಗಿರಿ ಬೆಟ್ಟದ ಟ್ರೆಕ್ಕಿಂಗ್ ಎಂದು ತಲಾ ಚಾರಣಿಗನಿಗೆ 250 ರೂಪಾಯಿ ಶುಲ್ಕವನ್ನ ಸರ್ಕಾರ ನಿಗದಿಪಡಿಸಿದೆ. ಆದರೆ ಟಿಕೆಟ್ ಬುಕ್ ಮಾಡಲು ಕೇವಲ ‘ಮೈ ಏಕೋ ಟ್ರಿಪ್’ ಅನ್ನೋ ವೆಬ್ ಸೈಟ್ ಮೂಲಕ ಆನ್ಲೈನ್ ನಲ್ಲಿ ಅಷ್ಟೇ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಸ್ಕಂದಗಿರಿ ಟ್ರೆಕ್ಕಿಂಗ್ ಗೆ ಆಗಮಿಸಿರುವ ಚಾರಣಿಗರು ಒಮ್ಮಲೆ ಸಾವಿರಾರು ಮಂದಿ ಬಂದಾಗ ಪರದಾಟ ಪಡಬೇಕಾಗುತ್ತಿದೆ. ಇದನ್ನೂ ಓದಿ: ದಾರಿ ಕಾಣದೆ ಪರದಾಡಿದ್ರು- ಪೊಲೀಸರಿಗೆ ಕರೆ ಮಾಡಿ ಕಾಪಾಡಿ ಅಂದ್ರು ಯುವಕ- ಯುವತಿಯರು..!
ಆಫ್ಲೈನ್ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಸಹ ಟಿಕೆಟ್ ಬುಕ್ ಮಾಡಿಕೊಳ್ಳುತ್ತಾರೆ. ಕೇವಲ ಪುಸ್ತಕದಲ್ಲಿ ಹೆಸರು ನಮೂದಿಸಿಕೊಂಡು ದುಡ್ಡು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ದುಡ್ಡು ಸೋರಿಕೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರಿಂದ ದೂರುಗಳು ಕೇಳಿಬಂದಿವೆ. ಮತ್ತೊಂದೆಡೆ ಸೂರ್ಯೋದಯದ ಸವಿ ಸವಿಯೋಕೆ ದುರ್ಗಮ ಹಾದಿಯ ಬೆಟ್ಟದಲ್ಲಿ ಸಾಗುವ ಚಾರಣಿಗರ ತಂಡಗಳಿಗೆ ಗೈಡ್ ವ್ಯವಸ್ಥೆ ಕಲ್ಪಿಸಬೇಕೆಂಬ ಆದೇಶ ಇದೆ. ಆದರೆ ಚಾರಣಿಗರ ಜೊತೆ ಯಾವುದೇ ಗೈಡ್ ಗಳನ್ನೂ ಸಹ ಕಳುಹಿಸುತ್ತಿಲ್ಲ.
ಮತ್ತೊಂದೆಡೆ ಭೂಲೋಕದ ಸ್ವರ್ಗ ತಾಣದಲ್ಲಿ ಯಾಮಾರಿದರೆ ಚಾರಣಿಗರು ನರಕಕ್ಕೆ ಜಾರುತ್ತಾರೆ. ಕನಿಷ್ಟ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ಸಹ ಇಲ್ಲದಂತಹ ಪರಿಸ್ಥಿತಿ ಇದೆ. ಯಾವುದೇ ಸುರಕ್ಷತಾ ಕ್ರಮಗಳನ್ನ ಸಹ ಸರ್ಕಾರ ಕೈಗೊಂಡಿಲ್ಲ. ಹೀಗಾಗಿ ಅಪ್ಪಿ ತಪ್ಪಿ ಯಾರಿಗಾದರೂ ಅನಾರೋಗ್ಯಕ್ಕೀಡಾದರೆ ಅಥವಾ ಸುಸ್ತಾಗಿ ಆಯತಪ್ಪಿ ಬಿದ್ದರು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವೇ ಇಲ್ಲದಂತ ದುಸ್ಥಿತಿ ಎದುರಾಗಿದೆ. ಹೀಗಾಗಿ ಟಿಕೆಟ್ ಬುಕ್ಕಿಂಗ್ ಅಂತ ಆನ್ಲೈನ್ ವ್ಯವಸ್ಥೆ ಜೊತೆ ಆಫ್ ಲೈನ್ ಟಿಕೆಟ್ ಬುಕ್ಕಿಂಗ್ ಕೌಂಟರ್ ಮಾಡಬೇಕು. ಅಷ್ಟೇ ಅಲ್ಲದೇ ಮೂಲಭೂತ ಸೌಲಭ್ಯಗಳು ಮತ್ತು ಸುರಕ್ಷತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿದೆ ಅಂತ ಚಾರಣಿಗರು ಮನವಿ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv