ಕೊಲಂಬೊ: ಆನ್ಲೈನ್ನಲ್ಲಿ ಹಣಕಾಸು ವಂಚನೆಯಲ್ಲಿ (Cyber Crime) ತೊಡಗಿದ್ದ 60 ಭಾರತೀಯ ಪ್ರಜೆಗಳನ್ನು ಶ್ರೀಲಂಕಾ (Sri Lanka) ಪೊಲೀಸರು ಬಂಧಿಸಿದ್ದಾರೆ. ಕೊಲಂಬೊ ಸುತ್ತಮುತ್ತಲಿನ ಮಡಿವೇಲಾ, ಬಟ್ಟರಮುಲ್ಲಾ ಮತ್ತು ಪಶ್ಚಿಮ ಕರಾವಳಿ ಪಟ್ಟಣವಾದ ನೆಗೊಂಬೊದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಈ ಪ್ರದೇಶಗಳಲ್ಲಿ ಏಕಕಾಲದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಬಂಧಿತ ಆರೋಪಿಗಳಿಂದ 135 ಮೊಬೈಲ್ ಫೋನ್ಗಳು ಮತ್ತು 57 ಲ್ಯಾಪ್ಟಾಪ್ಗಳನ್ನು ವಶಕ್ಕೆ ಪಡೆಯಲಾಗಿದೆ. ಸಂತ್ರಸ್ತೆಯೊಬ್ಬರ ದೂರಿನ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವಕ್ತಾರ ಎಸ್ಎಸ್ಪಿ ನಿಹಾಲ್ ತಾಲ್ದುವ ತಿಳಿಸಿದ್ದಾರೆ. ಇದನ್ನೂ ಓದಿ: ಪವಿತ್ರಾಗೆ 5 ತಿಂಗಳಿಂದ ಮೆಸೇಜ್- ರೇಣುಕಾಸ್ವಾಮಿ ಚಾಟ್ ರಹಸ್ಯ ಬಯಲು
ಬಂಧಿತರು ವಾಟ್ಸಾಪ್ ಮೂಲಕ ಜನರನ್ನು ಸಂಪರ್ಕಿಸಿ ಹಣದ ಆಮಿಷ ಒಡ್ಡುತ್ತಿದ್ದರು. ಬಳಿಕ ಠೇವಣಿ ಇಡುವಂತೆ ಸೂಚಿಸಿ ಒತ್ತಡ ಹಾಕಿ ವಂಚಿಸುತ್ತಿದ್ದರು ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಇಬ್ಬರೂ ವಂಚಕರಿಗೆ ನೆರವು ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರು ಹಣಕಾಸಿನ ವಂಚನೆ, ಅಕ್ರಮ ಬೆಟ್ಟಿಂಗ್ ಹಾಗೂ ಜೂಜು ಸೇರಿದಂತೆ ವಿವಿಧ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇವರಿಂದ ವಂಚನೆಗೊಳಗಾದವರಲ್ಲಿ ಸ್ಥಳೀಯರು ಮತ್ತು ವಿದೇಶಿಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 50 ನಿಮಿಷ ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ‘ಪೊರ್ಕಿ’ ಕ್ರೌರ್ಯ!