ಕಲಬುರಗಿ: ನನಗೆ ಟಿಕೆಟ್ ಮಿಸ್ ಆಗಿದ್ದರಿಂದ ಇಲ್ಲಿವರೆಗೆ ಬೆಂಬಲಿಗರು ಊಟ ಸಹ ಮಾಡಿಲ್ಲ. ಕಳೆದ ರಾತ್ರಿಯಿಂದ ಇಲ್ಲಿಯವರೆಗೆ ಬೆಂಬಲಿಗರು/ಅಭಿಮಾನಿಗಳು ಸ್ವಯಂಪ್ರೇರಿತವಾಗಿ ನೆರೆದಿದ್ದಾರೆ ಎಂದು ಜೇವರ್ಗಿ ಕ್ಷೇತ್ರ (Jevargi Constituency) ದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ (Doddappa Gowda Patil Naribol) ಹೇಳಿದ್ದಾರೆ.
ಟಿಕೆಟ್ ಮಿಸ್ ಆಗಿರುವ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನೀವು ಮುನ್ನುಗ್ಗಿ ಗೌಡ್ರೆ. ನಾವು ನಿಮ್ ಜೊತೆ ಇದ್ದೀವಿ ಅಂತಾ ಭರವಸೆ ನೀಡಿದ್ದಾರೆ. 23 ವರ್ಷಗಳ ಕಾಲ ಜನಸಾಮಾನ್ಯರ ನ್ಯಾಯಾಕ್ಕಾಗಿ ನಮ್ಮ ಕುಟುಂಬ ಹೋರಾಡಿದೆ. ಯಾರಿಗೂ ಅಧಿಕಾರ ಶಾಶ್ವತವಲ್ಲ. ಕ್ಷೇತ್ರದ ಸೇವಕನಾಗಿ ಕೆಲಸ ಮಾಡುವ ಅವಕಾಶ ತಪ್ಪಿಸಲು ಕೆಲ ಕುತಂತ್ರಿಗಳು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಗುಡ್ಬೈ: 21 ವರ್ಷಗಳ ಕಾಲ ಜೇವರ್ಗಿ ಕ್ಷೇತ್ರದಲ್ಲಿ ಪಕ್ಷವನ್ನ ಕಟ್ಟಿ ಬೆಳೆಸಿದ್ದೇನೆ. ಕಾರ್ಯಕರ್ತರೊಡನೆ ಪಕ್ಷವನ್ನ ಬೇರುಮಟ್ಟದಿಂದ ಪಕ್ಷವನ್ನ ಕಟ್ಟಿದ್ದೇನೆ. ಕಾರ್ಯಕರ್ತರಿಗೆ ನೋವಾದಾಗ ನಾನು ಯಾಕೆ ಪಕ್ಷದಲ್ಲಿ ಇರಬೇಕು?. ಆದ್ದರಿಂದ ನಾನು ಬಿಜೆಪಿ (BJP) ಯ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ಜನರು ತೋರಿಸಿದ ಮಾರ್ಗದಲ್ಲಿ ನಾನು ಮುನ್ನುಗ್ಗುತ್ತೇನೆ ಎಂದು ಸಾವಿರಾರು ಜನರ ಸಮ್ಮುಖದಲ್ಲಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಚುನಾವಣಾ ರಾಜಕೀಯಕ್ಕೆ ಎಸ್.ಅಂಗಾರ ನಿವೃತ್ತಿ ಘೋಷಣೆ
ಒಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದೆ. ಜೇವರ್ಗಿ ಕ್ಷೇತ್ರದಲ್ಲೂ ಸಹ ಬಿಜೆಪಿ ಬಂಡಾಯದ ಬಾವುಟ ಹಾರುತ್ತಿದ್ದು, ಜೇವರ್ಗಿ ಕ್ಷೇತ್ರಕ್ಕೆ ಶಿವರಾಜ್ ಪಾಟೀಲ್ ರದ್ದೇವಾಡಗಿ ಹೆಸರು ಘೋಷಣೆ ಬೆನ್ನಲ್ಲೆ ಭಿನ್ನಮತ ಸ್ಫೋಟವಾಗಿದೆ.