ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯ, ಉದ್ಯಮಿ ಸಿದ್ದಾರ್ಥ್ ನಾಪತ್ತೆಯಾಗಿ ಸುಮಾರು 15-16 ಗಂಟೆಯಾದ್ರೂ ಇನ್ನೂ ಯಾವುದೇ ಸುಳಿಯೂ ಪತ್ತೆಯಾಗಿಲ್ಲ. ಮಂಗಳೂರಿನ ನೇತ್ರಾವತಿ ನದಿಯಲ್ಲಿ ಪೊಲೀಸರು, ಅಗ್ನಿಶಾಮಕ ದಳದವರು ಸತತವಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಸಿದ್ಧಾರ್ಥ್ ಅವರು ಒಬ್ಬ ಆಗರ್ಭ ಶ್ರಿಮಂತರಾಗಿದ್ದು, ಸಾವಿರಾರು ಜನರಿಗೆ ಕೆಲಸ ಕೊಟ್ಟಿದ್ದರು. ಸಿದ್ಧಾರ್ಥ್ ಅವರು ಚಿಕ್ಕಮಗಳೂರಿನಲ್ಲಿ ಅಂದಾಜು 25 ಸಾವಿರಕ್ಕೂ ಅಧಿಕ ಕಾಫಿ ಎಸ್ಟೇಟ್ ಮಾಲೀಕರಾಗಿದ್ದಾರೆ. ಜೊತೆಗೆ ಐಷಾರಾಮಿ ಸೆರಾಯ್ ಹೊಟೇಲ್ ಮಾಲೀಕರು ಆಗಿದ್ದಾರೆ. ಅಷ್ಟೇ ಅಲ್ಲದೆ ಅಂಬರ್ ವ್ಯಾಲಿ ರೆಸಿಡೆನ್ಸಿಯಲ್ ಸ್ಕೂಲ್ ಮಾಲೀಕರಾಗಿದ್ದಾರೆ.
ಎಬಿಸಿ ಕಾಫಿ ಕ್ಯೂರಿಂಗ್ ಮಾಲೀಕರಾಗಿದ್ದು, ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಅಂದಾಜು 50 ಸಾವಿರಕ್ಕೂ ಅಧಿಕ ಜನರಿಗೆ ಕೆಲಸ ಕೊಟ್ಟಿದ್ದಾರೆ. ನೋಡಲು ತುಂಬಾ ಸರಳವಾಗಿರುತ್ತಿದ್ದ ಸಿದ್ದಾರ್ಥ್ ಅವರ ಸರಳ ಜೀವನ ಶೈಲಿ ಎಲ್ಲರನ್ನೂ ಬೆರಗುಗೊಳಿಸುತ್ತಿತ್ತು. ಕೋಟಿಗಳ ಒಡೆಯರಾಗಿದ್ದರು. ಸಿದ್ಧಾರ್ಥ್ ಅವರು ತುಂಬಾ ಸರಳವಾಗಿರುತ್ತಿದ್ದರು. ಹಣವಿದೆ ಎಂದು ದರ್ಪ ತೋರುತ್ತಿರಲಿಲ್ಲ.
ತಮ್ಮ ಕೆಫೆ ಕಾಫಿ ಡೇ ಮಾಲೀಕ ಉದ್ಯಮಿ ಸಿದ್ಧಾರ್ಥ್ ಅವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿಯನ್ನು ಬಂದ್ ಮಾಡಲಾಗಿದೆ. ಪ್ರತಿ ದಿನದಂತೆ ಸಿಬ್ಬಂದಿ ಇಂದು ಕೂಡ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಸಿದ್ಧಾರ್ಥ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಇದೀಗ ಕಂಪನಿಯನ್ನು ಬಂದ್ ಮಾಡಲಾಗಿದೆ.