ರಾಯಚೂರು: ಮಹಾತ್ಮರ ಜನ್ಮ ದಿನವನ್ನು ಉತ್ಸವವನ್ನಾಗಿ ನಾವು ಆಚರಿಸಿದ್ದೇವೆ. ತುಮಕೂರಿನ ಶಿವಕುಮಾರ ಸ್ವಾಮಿಜೀಯವರ ಜನ್ಮೋತ್ಸವ ಮಾಡಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡುವಳಿಕೆಗಳು ಈ ಹಿಂದೆ ಭಿನ್ನವಾಗಿದ್ದವು ಎಂದು ವಸತಿ ಸಚಿವ ವಿ.ಸೋಮಣ್ಣ ಸಿದ್ದರಾಮೋತ್ಸವಕ್ಕೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಮಾನ್ವಿಯಲ್ಲಿ ಶಾಸಕ ಶಿವನಗೌಡ ನಾಯಕ್ ಹುಟ್ಟುಹಬ್ಬ ನಿಮಿತ್ತ ಆಯೋಜಿಸಿರುವ ಶಿವಾಭಿಮಾನ ಕಾರ್ಯಕ್ರಮ ಹಿನ್ನೆಲೆ ವಿ.ಸೋಮಣ್ಣ ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಚರಣೆ, ವೈಭವಗಳನ್ನು ಸಿದ್ದರಾಮಯ್ಯ ಅವರು ಇಷ್ಟ ಪಡುತ್ತಿರಲಿಲ್ಲ. ಈಗ ತಮ್ಮ 75ನೇ ವರ್ಷದ ಜನ್ಮ ದಿನೋತ್ಸವ ಆಚರಣೆಗೆ ಮುಂದಾಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ ನಾನು ಶುಭ ಕೋರುತ್ತೇನೆ ಎಂದರು. ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ಶಿವಮೊಗ್ಗ ಬೀದಿಯಲ್ಲೇ ಬರ್ಬರ ಕೊಲೆ
ಸಿದ್ದರಾಮಯ್ಯ ಅವರ ಉತ್ಸವ ಆಗಲಿ ನಮಗೇನು? ಅವರ ಕಾರ್ಯಕರ್ತರು ಬರ್ತಾರೆ, ನಮ್ಮವರು ನಾಲ್ಕು ಜನ ಹೋಗ್ತಾರೆ. ಅಲ್ಲಿ ನೋಡ್ಕೊಂಡು ಬರ್ತಾರೆ. ಯಾರ್ಯಾರನ್ನ ಕರೆದುಕೊಂಡು ಬರಬೇಕೋ ಕರಕೊಂಡಬರ್ತಾರೆ. ಅವರಲ್ಲಿ ಯಾರ್ಯಾರು ಸ್ವಲ್ಪ ಬುದ್ಧಿವಂತರು ಇದಾರೋ ಅವರನ್ನು ಕರೆದುಕೊಂಡು ಬರೋಕೆ ಸ್ಕೀಮ್ ಹಾಕ್ತಿವಿ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಈ ರಾಜ್ಯದ ಒಬ್ಬ ನಾಯಕರು. ಅವರಿಗೆ ಒಳ್ಳೆಯದಾಗಲಿ ಇನ್ನೊಂದು ಸ್ವಲ್ಪ ಸರಿಹೋದರೆ ಎಲ್ಲಾ ಸರಿಹೋಗುತ್ತೆ. ಅವರವರೇ ಮಾತನಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮೋತ್ಸವಕ್ಕೆ ನಮ್ಮದು ಪರಾನೂ ಇಲ್ಲ, ವಿರೋಧಾನೂ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಡಿಕ್ಕಿ ಹೊಡೆದು ಆಟೋ ಮೇಲೆಯೇ ಬಿತ್ತು ಕಾರು – ಮೂವರು ಸ್ಥಳದಲ್ಲಿಯೇ ಸಾವು