ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾನೇ ಹಿಂದುಳಿದ ವರ್ಗಗಳ ಚಾಂಪಿಯನ್ ಅಂತಾರೆ. ಆದರೆ ಸಿದ್ದರಾಮಯ್ಯ ಹಿಂದುಳಿದ ವರ್ಗದ ಮುಖವಾಡ ಹಾಕಿಕೊಂಡು ಮುಸ್ಲಿಮರು, ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಾರೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಕಿಡಿಕಾರಿದರು.
ತೀರ್ಥಹಳ್ಳಿಯ ಗೋಪಾಲಗೌಡ ಸಭಾ ಭವನದಲ್ಲಿ ನಡೆಸಿದ ಬಿಜೆಪಿ, ಒಬಿಸಿ ಮೋರ್ಚಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಆಡಳಿತದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಪರಿಕಲ್ಪನೆಯೇ ಇರಲಿಲ್ಲ. ಬಿಜೆಪಿಯಿಂದ ಮಾತ್ರ ಹಿಂದುಳಿದ ವರ್ಗದ ಅಭಿವೃದ್ಧಿ ಸಾಧ್ಯ ಎಂದರು. ಇದನ್ನೂ ಓದಿ: 253 ಕೊರೊನಾ ಪ್ರಕರಣ – 611 ಮಂದಿ ಡಿಸ್ಚಾರ್ಜ್
ಸಿದ್ದರಾಮಯ್ಯ ತಾನೊಬ್ಬ ಕುರುಬ ಸಮಾಜದ ನಾಯಕ ಎಂದು ಬಿಂಬಿಸಿಕೊಂಡರು. ಆದರೆ ಕನಕದಾಸ, ಓಬವ್ವ, ಕೈವಾರ ತಾತಯ್ಯ ಜಯಂತಿ ಮಾಡಲು, ನಾರಾಯಣ ಗುರು ಹೆಸರಿನಲ್ಲಿ ವಸತಿ ಶಾಲೆ ಸ್ಥಾಪಿಸಲು ಬಿಜೆಪಿ ಸರ್ಕಾರವೇ ಬರಬೇಕಾಯಿತು. ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ ಎಂಬ ಸೋಗು ಹಾಕಿಕೊಂಡು ಟಿಪ್ಪು ಜಯಂತಿ ಆಚರಣೆ ಮಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಮಂಗಳೂರಿನಲ್ಲಿ ಹಿಂದುಳಿದ ವರ್ಗದ ಯುವಕರು ಮೃತಪಟ್ಟಾಗ ಸಿಎಂ ಆಗಿದ್ದ ಸಿದ್ದರಾಮಯ್ಯ ಬರಲೇ ಇಲ್ಲ. ಅವರ ಕುಟುಂಬಗಳ ಜೊತೆ ಕಣ್ಣೀರು ಸುರಿಸುವ ಕಾರ್ಯ ಮಾಡಲೇ ಇಲ್ಲ. ಅವರದ್ದೇ ಪಕ್ಷದ ಎಸ್ಸಿ ಸಮುದಾಯದ ನಾಯಕನ ಮನೆಗೆ ಬೆಂಕಿ ಹಚ್ಚಿದರೂ ಹೋಗಲಿಲ್ಲ ಎಂದರು. ಇದನ್ನೂ ಓದಿ: ಪಠ್ಯ ಪರಿಷ್ಕರಣೆಯಿಂದಲೇ ಎಳೆ ಮಕ್ಕಳಿಗೆ ವಿಷ ಉಣಿಸುತ್ತಿದ್ದಾರೆ: ರಮೇಶ್ ಕುಮಾರ್
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಕ್ಕಾಗಿ ಹಲವಾರು ಯೋಜನೆ ತಂದಿದೆ. ಸರ್ಕಾರಗಳ ಯೋಜನೆಗಳು ಎಲ್ಲ ಜನರಿಗೆ ಮುಟ್ಟಬೇಕು ಎಂಬುದು ಸಮಾವೇಶದ ಆಶಯ. ಆ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಒಬಿಸಿ ಮೋರ್ಚಾದಿಂದ ನಡೆಯುತ್ತಿದೆ. ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತು ಸಿಗಬೇಕು ಎಂದು ತಿಳಿಸಿದರು.