ಚಿತ್ರದುರ್ಗ: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯಿಂದಲೇ ಬಿಜೆಪಿಯವರು ಎಳೆ ವಯಸ್ಸಿನ ಮಕ್ಕಳಿಗೆ ವಿಷ ಉಣಿಸುತ್ತಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ದಾರ್ಶನಿಕರಿಗೆ ಬಿಜೆಪಿ ಅಪಮಾನ ಮಾಡುತ್ತಿದೆ ಎಂಬ ಪ್ರಶ್ನೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ವಿಚಾರ ಬೇಡ ಅಂದ್ರೆ ಮಕ್ಕಳಿಗೆ ಇನ್ನೇನು ಹೇಳುವುದು. ಜನರೇ ಮೌನವಾಗಿದ್ದಾಗ ಏನು ಮಾಡಲು ಸಾಧ್ಯವಿಲ್ಲ. ಆದ್ರೆ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಜನರು ಪ್ರತಿಭಟಿಸಿದಾಗ ಸರ್ಕಾರಕ್ಕೆ ಭಯ ಬರುತ್ತದೆ ಎಂದರು. ಇದನ್ನೂ ಓದಿ: ಪ್ರವಾಹ ಪೀಡಿತ ಅಸ್ಸಾಂ, ಮೇಘಾಲಯದ 253 ಜನರನ್ನ ರಕ್ಷಿಸಿದ IAF – ಮುಂದುವರಿದ ಶೋಧ ಕಾರ್ಯ
ಇದೇ ವೇಳೆ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರ ಇರುವ ಕಡೆಗಳಲ್ಲಿ ಬಿಜೆಪಿ ವಾಮಮಾರ್ಗದಿಂದ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಕರ್ನಾಟಕ ಆಯ್ತು, ಮಧ್ಯಪ್ರದೇಶ ಆಯ್ತು ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ವಾಮಮಾರ್ಗ ಹಿಡಿದು ಸರ್ಕಾರ ರಚಿಸಲು ಕಾರ್ಯಪ್ರವೃತವಾಗಿದೆ. ಸಮ್ಮಿಶ್ರ ಸರ್ಕಾರ ಇರುವ ಕಡೆಯೆಲ್ಲ ಆಪರೇಷನ್ ಕಮಲ ಮಾಡಿ ಸರ್ಕಾರ ನಡೆಸಲು ಮುಂದಾಗುತ್ತಿದೆ ಎಂದು ಆರೋಪಿಸಿದರು.
ನಾವೇನು ಹೊಸದಾಗಿ ಹೇಳುವುದು ಬೇಕಾಗಿಲ್ಲ. ಜನರೇ ಸುಮ್ಮನಿರುವಾಗ ನಾವೇನು ಹೇಳುವುದು. ಜನ ಹೇಳಬೇಕು. ಜನರು ಪ್ರತಿಕ್ರಿಯೆ ನೀಡಬೇಕು. ನಾವು ಹೇಳಿದರೆ ಪಕ್ಷದ ಅಭಿಪ್ರಾಯವಾಗುತ್ತದೆ. ಸಹಜವಾಗಿ ನಾವು ಬೇರೆ ಪಕ್ಷದವರು ಸರಿಯಿಲ್ಲ ಎಂದು ಹೇಳಬಹುದು. ಆದರೆ ಜನರೇ ಇದಕ್ಕೆ ಪ್ರತಿಕ್ರಿಯೆ ನೀಡದೆ ಇದ್ದಾಗ ಏನು ಮಾಡುವುದು. ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯವೇ ಅಂತಿಮವಾಗಿದ್ದಾಗ ಎಲ್ಲವನ್ನೂ ಜನರೇ ಹೇಳಬೇಕಾಗುತ್ತದೆ ಎಂದು ಕರೆ ನೀಡಿದರು. ಇದನ್ನೂ ಓದಿ: ಎಮರ್ಜೆನ್ಸಿ ವಿರೋಧಿಸಿ ಪ್ರತಿಭಟನೆ ಮಾಡ್ತಿದ್ದಾಗ ಪೊಲೀಸರನ್ನ ನೋಡಿ ಓಡಿ ಹೋಗಿದ್ವಿ: ಬೊಮ್ಮಾಯಿ