ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಮ್ಮ ಪುತ್ರ ರಾಕೇಶ್ನನ್ನು (Rakesh Siddaramaiah) ಶಾಸಕನಾಗಿ ಕಾಣಲು ಬಯಸಿದ್ದರು. ರಾಜಕೀಯದಲ್ಲಿ ತಮ್ಮ ಉತ್ತರಾಧಿಕಾರಿ ಮಾಡುವ ಆಕಾಂಕ್ಷೆ ಹೊಂದಿದ್ದರು. ಆದರೆ ವಿಧಿಯಾಟವೇ ಬೇರೆ ಇತ್ತು.
10 ವರ್ಷಗಳ ಹಿಂದೆಯೇ ಸಿದ್ದರಾಮಯ್ಯ ಅವರು ಹಲವಾರು ಬಾರಿ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದರು. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಆದರೆ ನಂತರ ತಮ್ಮ ನಿಲುವು ಬದಲಿಸಿಕೊಂಡಿದ್ದರು. 2016ರ ಫೆಬ್ರವರಿಯಲ್ಲಿ ನಡೆದ ಜಿಲ್ಲಾ ಹಾಗೂ ತಾ.ಪಂ. ಚುನಾವಣೆ ಕಾಲಕ್ಕೆ ಮುಂದೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ಆಶಯ ವ್ಯಕ್ತಪಡಿಸಿದ್ದರು. ಆಗ ರಾಕೇಶ್ಗೆ ತಾವು ಪ್ರತಿನಿಧಿಸುತ್ತಿರುವ ವರುಣ ಕ್ಷೇತ್ರ ಬಿಟ್ಟುಕೊಡುತ್ತಾರೆ ಎಂಬ ವಿಶ್ಲೇಷಣೆ ನಡೆದಿತ್ತು. ಎಲ್ಲವೂ ಸಿದ್ದರಾಮಯ್ಯ ಅವರ ಲೆಕ್ಕದಂತೆ ನಡೆದಿದ್ದರೆ 2018ರ ಚುನಾವಣೆಯಲ್ಲಿ ರಾಕೇಶ್ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಬೇಕಿತ್ತು. ಆದರೆ ವಿಧಿ ನಿಯಮ ಎಲ್ಲವನ್ನೂ ಉಲ್ಟಾ ಮಾಡಿತ್ತು.
ಮೈಸೂರು ತಾಲೂಕು ಸಿದ್ದರಾಮನಹುಂಡಿಯ ಸಿದ್ದರಾಮಯ್ಯ ಅವರಿಗೆ ಇಬ್ಬರು ಪುತ್ರರು. ರಾಕೇಶ್ ಹಾಗೂ ಡಾ. ಎಸ್ ಯತೀಂದ್ರ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ವಿದ್ಯಾರ್ಥಿಯಾದ ಯತೀಂದ್ರ (Yathindra Siddaramaiah) ಬಹಿರಂಗವಾಗಿ ಎಂದೂ ಕಾಣಿಸಿಕೊಂಡವರಲ್ಲ. ತಾವಾಯಿತು, ತಮ್ಮ ಪಾಡಾಯಿತು ಎಂಬಂತೆ ಇದ್ದವರು. ಹೆಚ್ಚಾಗಿ ತಾಯಿ ಪಾರ್ವತಿ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದರು.
ಆದರೆ ರಾಕೇಶ್ರದ್ದು ‘ಆ್ಯಂಗ್ರಿ ಯಂಗ್ಮ್ಯಾನ್’ ಶೈಲಿ. 2004 ರಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 2ನೇ ಬಾರಿಗೆ ಉಪ ಮುಖ್ಯಮಂತ್ರಿಯಾದ ನಂತರ ವಿಧಾನಸೌಧದಲ್ಲಿ ಕಾಣಿಸಿಕೊಳ್ಳತೊಡಗಿದರು. ಸಮಾಜವಾದದಲ್ಲಿ ನಂಬಿಕೆ ಇರುವ ಸಿದ್ದರಾಮಯ್ಯ ಅವರು ಕುಟುಂಬ ರಾಜಕಾರಣ ಪ್ರೋತ್ಸಾಹಿಸುವವರಲ್ಲ. ಆದರೆ ರಾಕೇಶ್ ಬಹು ವರ್ಷಗಳ ಹಿಂದೆಯೇ ಅಪಘಾತದಲ್ಲಿ ಗಾಯಗೊಂಡಿದ್ದರಿಂದ ತೀವ್ರ ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ಶಸ್ತ್ರಚಿಕಿತ್ಸೆಯೂ ಆಗಿತ್ತು. ಆತನ ಬಗ್ಗೆ ನಿರ್ಲಕ್ಷ್ಯ ತೋರಿಸಿದರೆ ಮಗ ಕೈತಪ್ಪಿ ಹೋಗಬಹುದು ಎಂಬ ಕಾರಣದಿಂದ ಹತ್ತಿರ ಬಿಟ್ಟುಕೊಂಡಿದ್ದರು. ಸ್ವಲ್ಪ ಮಟ್ಟಿನ ಪ್ರೀತಿ ತೋರಿಸುತ್ತಿದ್ದರು. ಆದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ಕೊಡು, ಬೇರೆ ವಿಚಾರಗಳಿಗೆ ತಲೆ ಹಾಕಬೇಡ ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದರು. ಇದನ್ನೂ ಓದಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಫೈಟಾ, ಬಂಟ-ಬಿಲ್ಲವ ಫೈಟಾ?
2016 ಜು.13 ರಂದು ತಮ್ಮ 39ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ರಾಕೇಶ್, ನನ್ನ ಮೇಲೆ ಅಪ್ಪನ ಪ್ರಭಾವವಿದೆ. ನಾನು ಅವರು ರಾಜಕೀಯದಿಂದ ನಿವೃತ್ತಿಯಾಗುವ ತನಕ ರಾಜಕಾರಣಕ್ಕೆ ಬರುವುದಿಲ್ಲ. ಇಲ್ಲದಿದ್ದಲ್ಲಿ ಅಪ್ಪ-ಮಕ್ಕಳ ರಾಜಕಾರಣ ಎಂಬ ಮಾತು ಬರುತ್ತದೆ. ಅವರು ಸೂಚಿಸಿದರೆ ಮಾತ್ರ ರಾಜಕೀಯಕ್ಕೆ ಬರುತ್ತೇನೆ ಎಂದಿದ್ದರು. ಆದರೆ ಬೇಲ್ಜಿಯಂ ಪ್ರವಾಸಕ್ಕೆ ಹೋಗಿದ್ದಾಗ ಅನಾರೋಗ್ಯದಿಂದ ನಿಧನರಾದರು. ಅನಿವಾರ್ಯವಾಗಿ ರಾಜಕೀಯವೇ ಬೇಡ ಅಂತಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ರಾಜಕೀಯ ಉತ್ತರಾಧಿಕಾರಿಯಾದರು. ಇದನ್ನೂ ಓದಿ: ದೇವೇಗೌಡರ ಮಕ್ಕಳು ಜಗಳ ಆಡ್ತಾರೆ ಅಂದರೆ ನೀವು ಸುಳ್ಳಾಗ್ತೀರಾ: ಸಿ.ಎಂ ಇಬ್ರಾಹಿಂ