ಕೆಪಿ ನಾಗರಾಜ್
ಮೈಸೂರಿನ ಗಾನಭಾರತಿ ಸಭಾಂಗಣದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಅತ್ಯಂತ ಕೀಳು ಮಟ್ಟದ ಪದ ಪ್ರಯೋಗಿಸಿ ಲೇವಡಿ ಮಾಡಿದ್ದರು.
ಈ ವಿಚಾರ ತಿಳಿದು ಸಿದ್ದರಾಮಯ್ಯ ಅವರ ಅಭಿಮಾನಿಗಳು ಅದೇ ವೇದಿಕೆ ಏರಿ ದೊಡ್ಡ ಗಲಾಟೆ ಮಾಡಿದ್ದರು. ಈ ಗಲಾಟೆ ಕಂಡು ಹಿರಣ್ಣಯ್ಯ ಅವರು ಅಕ್ಷರಶಃ ಗಾಬರಿ ಆಗಿದ್ದರು. ತಾವು ಸುರಕ್ಷಿತವಾಗಿ ಬೆಂಗಳೂರು ತಲುಪುವುದು ಕಷ್ಟ ಎಂಬಷ್ಟರ ಮಟ್ಟಿಗೆ ಆತಂಕಕ್ಕೆ ಒಳಗಾಗಿದ್ದರು. ಕಾಕಾತಾಳೀಯ ಎಂಬಂತೆ ಅವತ್ತು ಸಿದ್ದರಾಮಯ್ಯ ಮೈಸೂರಿನ ಶಾರದದೇವಿ ನಗರದಲ್ಲಿನ ತಮ್ಮ ಮನೆಯಲ್ಲಿದ್ದರು. ಅವರಿಗೂ ಈ ವಿಚಾರ ತಿಳಿಯಿತು.
ಸಿದ್ದರಾಮಯ್ಯ ಅವರು ಮನೆಯಲ್ಲಿದ್ದಾರೆ ಎಂಬ ವಿಚಾರ ತಿಳಿದ ಹಿರಣ್ಣಯ್ಯ ನೇರವಾಗಿ ಸಿದ್ದರಾಮಯ್ಯ ಬಳಿ ಬಂದು ಏನೋ ಬಾಯಿ ತಪ್ಪಿ ನಿಮ್ಮ ಬಗ್ಗೆ ‘ಆ’ ಪದ ಬಳಸಿ ಬಿಟ್ಟೆ. ನಿಮ್ಮವರಿಗೆ ಶಾಂತವಾಗಿರೋಕೆ ಹೇಳಿ. ನನ್ನನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕಳುಹಿಸಿ ಎಂದು ಕೇಳಿ ಕೊಂಡರು. ಆಗ ಸಿದ್ದರಾಮಯ್ಯ “ಇರಲಿ ಬಿಡಿ ನೀವು ಹಿರಿಯರಿದ್ದೀರಿ. ಏನೋ ಒಂದು ಮಾತು ಅಂದಿದ್ದೀರಿ. ಬೇಸರವಿಲ್ಲ. ನಮ್ಮವರಿಗೆ ನಿಮ್ಮ ವಿರುದ್ಧ ಗಲಾಟೆ ಮಾಡಬೇಡಿ ಅಂತಾ ಹೇಳ್ತೀನಿ” ಎಂದು ಹೇಳಿ ತಮ್ಮ ಪರವಾಗಿ ಗಲಾಟೆ ಮಾಡಿದವರನ್ನು ಮನೆಗೆ ಕರೆಸಿ ಏನೋ ಆಗಿದ್ದು ಆಗಿದೆ ಅವರು ಹಿರಿಯರು ಅವರ ಮೇಲೆ ಗಲಾಟೆ ಮಾಡಕೂಡದು ಅಂತಾ ಸೂಚನೆ ಕೊಟ್ಟರು.
ಇಷ್ಟಾದರೂ ಹಿರಣ್ಣಯ್ಯ ಅವರಿಗೆ ಗಾಬರಿ ಕಡಿಮೆ ಆಗಿರಲಿಲ್ಲ. ಇನ್ನೂ ಆತಂಕದಲ್ಲೆ ಇದ್ದರು. ಇದನ್ನು ಗಮನಿಸಿದ ಸಿದ್ದರಾಮಯ್ಯ ಅವರು ಖುದ್ದಾಗಿ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ, ಹಿರಣ್ಣಯ್ಯ ಅವರ ಕಾರನ್ನು ಎಸ್ಕಾರ್ಟ್ ಮಾಡಿಕೊಂಡು ಸುರಕ್ಷಿತವಾಗಿ ಮೈಸೂರಿನಿಂದ ಬೆಂಗಳೂರಿಗೆ ಕಳುಹಿಸಿ ಎಂದು ಸೂಚಿಸಿದರು. ಅದರಂತೆ ಅವರು ಬಹಳ ಸುರಕ್ಷಿತವಾಗಿ ಮೈಸೂರಿನಿಂದ ಬೆಂಗಳೂರಿಗೆ ಹೋದರು. ಅವತ್ತು ಹಿರಣ್ಣಯ್ಯ ಅವರು ಸಿದ್ದರಾಮಯ್ಯ ಅವರ ಮೇಲೆ ಬಳಸಿದ ಪದಗಳು ಅತ್ಯಂತ ಹೀನ ಮತ್ತು ತೀರಾ ಕೆಳಮಟ್ಟದ ಪದಗಳು. ಇದನ್ನು ಸಿದ್ದರಾಮಯ್ಯ ವೀಡೀಯೋದಲ್ಲಿ ನೋಡಿದ್ದರು. ಆದರೂ ಅವರು ಅತ್ಯಂತ ಸಮಚಿತ್ತದಿಂದ ವರ್ತಿಸಿದ್ದರು.