ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದ 10 ಸಾವಿರ ವಿದ್ಯಾರ್ಥಿಗಳು ಕೇಶ ಮುಂಡನೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.
ಜನವರಿ 29ರಂದು ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿದ್ದ ಶ್ರೀ ಶಿವಕುಮಾರ ಸ್ವಾಮಿಜಿ ಅವರ ಪುಣ್ಯಸ್ಮರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತಮಗೆ ಅನ್ನ, ಅಕ್ಷರ, ಆಶ್ರಯ ಕೊಟ್ಟು ಬಾಳಿಗೆ ಬೆಳಕಾಗಿದ್ದ ಶ್ರೀಗಳ ಪುಣ್ಯಸ್ಮರಣೆಯ ದಿನದಂದು ಸಿದ್ದಗಂಗಾ ಮಠದ ವಿದ್ಯಾರ್ಥಿಗಳು ಸಾಮೂಹಿಕ ಕೇಶ ಮುಂಡನೆ ಮಾಡಲಿದ್ದಾರೆ.
ಸಿದ್ದಗಂಗಾ ಮಠದಲ್ಲಿದ್ದ ಮಕ್ಕಳಿಗೆ ಶ್ರೀ ಶಿವಕುಮಾರ ಸ್ವಾಮೀಜಿಗಳು ಯಾವುದೇ ಕೊರತೆಯಾಗದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ನೋಡಿಕೊಳ್ಳುತ್ತಿದ್ದರು. ಆದರಿಂದ ಶ್ರೀಗಳು ಅಗಲಿದ ಬಳಿಕ ವಿದ್ಯಾರ್ಥಿಗಳಲ್ಲಿ ಅನಾಥ ಭಾವದಿಂದ ನೊಂದಿಕೊಂಡಿದ್ದರು. ಈಗ ತಮ್ಮ ಕೇಶ ಮುಂಡನೆ ಮಾಡಿಸುವ ಮೂಲಕ ವಿದ್ಯಾರ್ಥಿಗಳು ಶ್ರೀಗಳಿಗೆ ನಮನ ಸಲ್ಲಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಇಷ್ಟೊಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಕೇಶ ಮುಂಡನೆಯನ್ನು ಉಚಿತವಾಗಿ ಮಾಡಲು ಅಖಿಲ ಕರ್ನಾಟಕ ಸವಿತಾ ಸಮಾಜ ಯುವಕರ ಸಂಘದವರು ಮುಂದಾಗಿದ್ದಾರೆ. ಇದಕ್ಕಾಗಿ ಅಖಿಲ ಕರ್ನಾಟಕ ಸವಿತಾ ಸಮಾಜ ಯುವಕರ ಸಂಘದವರಿಗೆ ಸಿದ್ದಗಂಗಾ ಮಠದಿಂದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಆಶೀರ್ವಾದ ಪತ್ರವನ್ನು ಬರೆದಿದ್ದಾರೆ. ಇದನ್ನೂ ಓದಿ: ಭಾರತ ರತ್ನ – ಲತಾಗಿಲ್ಲದ ನಿಯಮಾವಳಿ ಸಿದ್ದಗಂಗಾ ಶ್ರೀಗಳಿಗೆ ಮಾತ್ರ ಯಾಕೆ?
ಪತ್ರದಲ್ಲಿ ಏನಿದೆ?
ಅಖಿಲ ಭಾರತ ಸವಿತಾ ಸಮಾಜ ಯುವಕರ ಸಂಘದವರು ಜನವರಿ 29ರ ಮಂಗಳವಾರದಂದು ಶ್ರೀಕ್ಷೇತ್ರದ ವಿದ್ಯಾರ್ಥಿಗಳಿಗೆ ಉಚಿತ ಕೇಶ ಮುಂಡನ ಸೇವೆ ಮಾಡಲು ಮುಂದೆ ಬಂದಿರುವುದು ತುಂಬಾ ಸಂತೋಷದ ವಿಷಯ.
ಸವಿತಾ ಸಮಾಜದ ಎಲ್ಲಾ ಕಾರ್ಯಕರ್ತರಿಗೆ ಪರಮಾತ್ಮನು ಹಾಗೂ ಶ್ರೀ ಸಿದ್ದಗಂಗಾ ಗುರುಪರಂಪರೆ ಸಕಲ ಸನ್ಮಂಗಳವನ್ನುಂಟು ಮಾಡಲೆಂದು ಹಾರೈಸುತ್ತೇವೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಆಶೀರ್ವಾದ ಪತ್ರ ಬರೆದಿದ್ದಾರೆ.
ಶ್ರೀಗಳ ಪುಣ್ಯಸ್ಮರಣೆಯ ದಿನವೇ ಮಕ್ಕಳು ಕೇಶ ಮುಂಡನೆ ಮಾಡಿಕೊಳ್ಳಲಿದ್ದು, ಈ ಮೂಲಕ ಜೀವನದ ದಾರಿ ತೋರಿಸಿದ ದೇವರನ್ನು ಸ್ಮರಿಸಲು ವಿದ್ಯಾರ್ಥಿಗಳು ನಿರ್ಧಾರ ಮಾಡಿ ಭಕ್ತಿಯಲ್ಲಿ ಜಗತ್ತಿಗೆ ಮಾದರಿಯಾಗಿದ್ದಾರೆ. ಗುರುವಿಗೆ ನಮನ ಸಲ್ಲಿಸಲೆಂದು ಮಠದಲ್ಲಿರುವ 10 ಸಾವಿರ ವಿದ್ಯಾರ್ಥಿಗಳು ಸಾಮೂಹಿಕ ಕೇಶ ಮುಂಡನೆ ಕಾರ್ಯವು ವಿಶ್ವದಾಖಲೆಯಾಗುವ ಸಾಧ್ಯತೆಯಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv