ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮೇಲೆ ಗುರುವಾರ ಗುಂಡಿನ ದಾಳಿ ನಡೆದಿದ್ದು (Shooting), ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಇಮ್ರಾನ್ ಖಾನ್ ಅವರು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಸೇರಿದಂತೆ ಮೂವರು ತನ್ನ ಮೇಲೆ ದಾಳಿಯ ಸಂಚು ಮಾಡಿರುವುದಾಗಿ ಅನುಮಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಪಾಕ್ ಪ್ರಧಾನಿ ಶೆಹೆಬಾಜ್ ಷರೀಫ್, ಆಂತರಿಕ ಸಚಿವ ರಾಣಾ ಸನಾವುಲ್ಲಾ ಹಾಗೂ ಮೇಜರ್ ಜನರಲ್ ಫೈಸಲ್ ಅವರು ಮಾಜಿ ಪ್ರಧಾನಿ ಮೇಲೆ ಗುಂಡು ಹಾರಿಸುವಂತೆ ದಾಳಿಕೋರನಿಗೆ ಆದೇಶ ನೀಡಿರುವುದಾಗಿ ಇಮ್ರಾನ್ ಖಾನ್ ಅವರು ಅನುಮಾನಗೊಂಡಿದ್ದಾರೆ ಎಂದು ಪಾಕಿಸ್ತಾನ ತೆಹ್ರಿಕ್-ಎ-ಇನ್ಸಾಫ್ (ಪಿಟಿಐ) ನಾಯಕ ಅಸದ್ ಉಮರ್ ಹಾಗೂ ಮಿಯಾನ್ ಅಸ್ಲಾಮ್ ಇಕ್ಬಾಲ್ ತಿಳಿಸಿದ್ದಾರೆ.
ಇಮ್ರಾನ್ ಖಾನ್ ಅವರ ಸ್ಥಿತಿ ಈಗ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅವರೊಂದಿಗೆ ನಾವು ಮಾತನಾಡಿದ್ದು, ಈ ವಿಚಾರವನ್ನು ಅಲ್ಲನಿಗೆ ಬಿಡಬೇಕು ಎಂದಿದ್ದಾರೆ. ಕೊಲೆಗೆ ಸಂಚು ಮಾಡಿದ ಮೂವರನ್ನು ತಮ್ಮ ಹುದ್ದೆಯಿಂದ ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇಮ್ರಾನ್ ಖಾನ್ ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಬರುವುದಕ್ಕೆ ನಾವು ಕಾಯುತ್ತಿದ್ದೇವೆ. ಈ ಮೂವರನ್ನು ಅವರ ಹುದ್ದೆಯಿಂದ ತೆಗೆದುಹಾಕದೇ ಹೋದಲ್ಲಿ ನಾವು ದೇಶಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ನಿನ್ನೆ ಇಮ್ರಾನ್ ಖಾನ್ ನೇತೃತ್ವದಲ್ಲಿ ಜಫರಾಲಿ ಖಾನ್ ಚೌಕ್ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ರ್ಯಾಲಿ ವೇಳೆ ದುಷ್ಕರ್ಮಿಯೊಬ್ಬ ಇಮ್ರಾನ್ ಖಾನ್ ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದ. ಘಟನೆಯಲ್ಲಿ ಇಮ್ರಾನ್ ಖಾನ್ ಸೇರಿದಂತೆ 15 ಜನರಿಗೆ ಗಾಯಗಳಾಗಿತ್ತು. ಘಟನೆಯಲ್ಲಿ ಒಬ್ಬ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಕೊಚ್ಚಿ, ತುಂಡು ಮಾಡಿ ನಾಯಿಗೆ ಬಿಸಾಕ್ತೀವಿ- ಮುತಾಲಿಕ್ಗೆ ಜೀವ ಬೆದರಿಕೆ
ತಕ್ಷಣ ದುಷ್ಕರ್ಮಿಯನ್ನು ಬಂಧಿಸಿದ ಪೊಲೀಸರು, ವಿಚಾರಣೆ ನಡೆಸಿದಾಗ, ನಾನು ಇಮ್ರಾನ್ ಖಾನ್ ಅವರನ್ನು ಕೊಲ್ಲಲು ಬಂದಿದ್ದೆ. ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ. ನನ್ನ ಉದ್ದೇಶ ಅವರೊಬ್ಬರನ್ನು ಮಾತ್ರವೇ ಕೊಲ್ಲುವುದಾಗಿತ್ತು. ಅವರನ್ನು ಕೊಲ್ಲಲು ನಾನೊಬ್ಬನೇ ಬಂದಿದ್ದು, ನನ್ನ ಹಿಂದೆ ಯಾರೂ ಇಲ್ಲ ಎಂದು ಹೇಳಿಕೆ ನೀಡಿದ್ದಾನೆ. ಇದನ್ನೂ ಓದಿ: ಇಸ್ರೇಲ್ ಚುನಾವಣೆಯಲ್ಲಿ ಗೆದ್ದ ಬೆಂಜಮಿನ್ ನೆತನ್ಯಾಹು – ಪ್ರಧಾನಿ ಮೋದಿ ಅಭಿನಂದನೆ