ಬೆಂಗಳೂರು: ನಗರದಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಜಿಂದಾಲ್ ವಿಚಾರದಲ್ಲಿ ಮೌನವಹಿಸಿದ್ದು ಏಕೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಎಚ್ಕೆ ಪಾಟೀಲ್ ಅವರೇ ಜಿಂದಾಲ್ ನಡುವಿನ ಒಪ್ಪಂದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಇಂದು ಜಿಂದಾಲ್ ಅವರಿಗೆ ಕೋಟಿ ಕೋಟಿ ಬೆಲೆ ಬಾಳುವ ಜಮೀನನ್ನು ಕೇವಲ ಎಕರೆಗೆ 1.22 ಲಕ್ಷ ರೂ.ಗಳಂತೆ ನೀಡಿದ್ದೀರಿ. ಸಂಸ್ಥೆ ನೀಡಿರುವ ಉದ್ಯೋಗ ಸೇರಿದಂತೆ ಯಾವುದೇ ಭರವಸೆಯನ್ನ ನೆರವೇರಿಸುವ ನಿರೀಕ್ಷೆ ಇಲ್ಲ. ಸರ್ಕಾರಕ್ಕೆ ನೀಡಬೇಕಾದ ಹಣವೇ ಬಾಕಿ ಇದ್ದ ವೇಳೆ ಆದೇ ಸಂಸ್ಥೆಗೆ ಭೂಮಿ ನೀಡಲಾಗಿದೆ ಎಂದು ಆರೋಪಿಸಿದರು.
ಇದರ ಹಿಂದಿರುವ ವ್ಯವಹಾರ ಏನು ಎಂಬುದರ ಬಗ್ಗೆ ತಿಳಿಯಬೇಕಾಗಿದ್ದು, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅಥವಾ ರಾಜ್ಯದ ಕೆಜೆ ಜಾರ್ಜ್ ಮತ್ತು ಸಚಿವ ಡಿಕೆ ಶಿವಕುಮಾರ್ ಹಾಗೂ ಸಿಎಂ ಕುಮಾರಸ್ವಾಮಿ ಅವರು ಸೇರಿ ನಡೆಸಿರುವ ವ್ಯವಹಾರವೇ ಇದು ಎಂದು ಪ್ರಶ್ನಿಸಿದರು.
ಡಿಕೆ ಶಿವಕುಮಾರ್ ಅವರು ಬಳ್ಳಾರಿ ಉಸ್ತುವಾರಿ ಆಗಿದ್ದು ಇದಕ್ಕೇನಾ? ಈ ಬಗ್ಗೆ ದೇವೇಗೌಡರು, ಸಿಎಂ ಕೂಡ ಏಕೆ ಮೌನ ವಹಿಸಿದ್ದಾರೆ ಎಂಬುದು ತಿಳಿಯಬೇಕು. ಕಾಂಗ್ರೆಸ್ನಲ್ಲಿಯೇ ಅಂತಕರಿವಾಗಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ ನಡುವೆಯೂ ಏಕೆ ಭೂಮಿಯನ್ನ ಮಾರಾಟ ಮಾಡುತ್ತಿದ್ದೀರಿ. ಈ ಭೂಮಿ ಮಾರಾಟಕ್ಕೆ ಬಿಜೆಪಿ ಅವಕಾಶ ಕೊಡಲ್ಲ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸಮಿಶ್ರ ಸರ್ಕಾರ ಇರುವುದು ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ಆಪರೇಷನ್ ಕಮಲ ನಾವು ಮಾಡುತ್ತಿಲ್ಲ. ಶಾಸಕರನ್ನು ಛೂ ಬಿಟ್ಟು ಆಪರೇಷನ್ ಕಮಲದ ಹೆಸರಲ್ಲಿ ಸಿದ್ದರಾಮಯ್ಯ ಅವರೇ ಆಟ ಆಡುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ನಾಲ್ಕು ಶಾಸಕರನ್ನು ಅಲ್ಲಿಗೆ ಕಳಿಸೋದು ಇಲ್ಲಿಗೆ ಕಳಿಸೋದು ಮಾಡುತ್ತಿದ್ದಾರೆ. ಸಿಎಂ ಆಗಬೇಕು ಎಂದರೆ ಪಕ್ಷದ ವರಿಷ್ಠರನ್ನು ಅವತ್ತು ಹೇಳಬೇಕಿತ್ತು. ಈಗ ರಿವರ್ಸ್ ಆಪರೇಷನ್ ಅಂತಿದಾರೆ ಅದು ಕೂಡ ಒಂದು ರೂಮರ್ ಅಷ್ಟೇ ಎಂದರು.
ರಾಜ್ಯದ ಬರ ನಿರ್ವಹಣೆಯಲ್ಲೂ ರಾಜ್ಯ ಸರ್ಕಾರ ವಿಫಲ ಆಗಿದ್ದು, ಈ ಹಿಂದೆ ಯುಪಿಎ ಸರ್ಕಾರದಿಂದ ಹತ್ತು ವರ್ಷದಲ್ಲಿ 4,822 ಕೋಟಿ ರೂ. ಬರ ಅನುದಾನ ಬಂದಿತ್ತು. ಮೋದಿಯವರ ಸರ್ಕಾರ ಐದು ವರ್ಷದಲ್ಲಿ 7,170 ಕೋಟಿ ರೂ. ಬರ ನಿರ್ವಹಣೆಗೆ ಹಣ ಕೊಟ್ಟಿದೆ. ಇದನ್ನು ರಾಜ್ಯ ಸರ್ಕಾರ ಸದುಪಯೋಗ ಮಾಡಿಕೊಂಡಿಲ್ಲ. ಕೊಡಗು ಪುನರ್ ಸ್ಥಾಪಿಸುವ ಕೆಲಸ ಸರಿಯಾಗಿ ಆಗಿಲ್ಲ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.