ಶಿವಮೊಗ್ಗ: ನಗರದ ನಡು ರಸ್ತೆಯಲ್ಲಿ ಏಕಾಏಕಿ ಹುತ್ತ ಪ್ರತ್ಯಕ್ಷವಾಗಿದೆ. ಪ್ರತ್ಯಕ್ಷವಾದ ಹುತ್ತಕ್ಕೆ ಪೂಜೆ ಸಹ ಮಾಡಲಾಗಿದೆ.
ರಸ್ತೆಯಲ್ಲಿ ಗುಂಡಿ ಬಿದ್ದರೆ ಅದನ್ನ ಲೆಕ್ಕಿಸದೇ ಸಂಬಂಧಪಟ್ಟ ಇಲಾಖೆಯವರು ಓಡಾಡೋದು ಸಾಮಾನ್ಯ. ಆದರೆ ಈ ಗುಂಡಿಗಳಿಗೆ ಎಡತಾಕಿ ಸಾರ್ವಜನಿಕರು ಮಾತ್ರ ತೊಂದರೆಗೊಳಪಡುತ್ತಲೇ ಇರುತ್ತಾರೆ. ಇಂತಹ ಅಧಿಕಾರಿಗಳಿಗೆ ಪಾಠ ಕಲಿಸಲೆಂದೇ ನಟ ಉಪೇಂದ್ರ ಅವರ ಪ್ರಜಾಕೀಯ ಪಾರ್ಟಿಯ ಸದಸ್ಯರು ಶಿವಮೊಗ್ಗದಲ್ಲಿ ಇಂದು ವಿನೂತನವಾಗಿ ಪ್ರತಿಭಟಿಸಿದ್ದಾರೆ.
ನಗರದ ಜೈಲ್ ವೃತ್ತದ ಮಧ್ಯ ಭಾಗದಲ್ಲಿ ಗುಂಡಿಯೊಂದು ಬಾಯಿ ತೆರೆದು ಕೂತಿತ್ತು. ಈ ಗುಂಡಿಯನ್ನು ಗಮನಿಸಿದ ಪ್ರಜಾಕೀಯ ಪಕ್ಷದ ಕಾರ್ಯಕರ್ತರು ಶಿವಮೊಗ್ಗ ಜಿಲ್ಲೆಯ ಸಂಚಾಲಕ ವೆಂಕಟೇಶ್ ನೇತೃತ್ವದಲ್ಲಿ ಈ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯನ್ನು ಮುಚ್ಚಲು ವಿನೂತನ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಈ ಗುಂಡಿ ಮೇಲೆ ಮಣ್ಣನ್ನು ಹಾಕಿ ಕಬ್ಬಿಣದ ರಾಡನ್ನು ನೆಟ್ಟು ರಾಜಕೀಯದ ಕೊಡುಗೆ ಬದಲಾವಣೆಗಾಗಿ ಎಂದು ನಾಮ ಫಲಕ ಹಾಕಿದ್ದಾರೆ. ಜೊತೆಗೆ 2 ಪ್ಲಾಸ್ಟಿಕ್ ಹಾವುಗಳನ್ನು ಇಟ್ಟು ಅದರ ಸುತ್ತ ಹೂವಿನ ಹಾರ ಹಾಕಿ ಗಂದಧ ಕಡ್ಡಿ ಹಚ್ಚಿದ್ದಾರೆ.
ಈ ಮೂಲಕ ದೇವರ ಗುಡಿಯನ್ನಾಗಿ ರೂಪಿಸಿ ಜನರು ಬಂದು ಪೂಜೆ ಮಾಡುವಂತಾಗಲಿ ಎಂದು ಗಮನ ಸೆಳೆದಿದ್ದಾರೆ. ಆದರೆ ಇವರು ಹೀಗೆ ಮಾಡಿದ್ದೆ ತಡ ಪಾಲಿಕೆ ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಇದೀಗ ಈ ಮಣ್ಣನ್ನು ತೆಗೆದು, ಅದೇ ಮಣ್ಣಿನಿಂದ ಈ ಗುಂಡಿಯನ್ನು ಮುಚ್ಚಿದ್ದಾರೆ. ಈ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ತೋರಿಸಿ ಅಧಿಕಾರಿಗಳನ್ನ ಬಡಿದೆಬ್ಬಿಸುವ ಕೆಲಸ ಮಾಡಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.