ನಿರ್ಮಿತಿ ಕೇಂದ್ರದಲ್ಲಿ ಭ್ರಷ್ಟಾಚಾರ – ಗುತ್ತಿಗೆದಾರರ ಬದಲು ಸಿಬ್ಬಂದಿಯ ಖಾತೆಗೆ ಹಣ ವರ್ಗಾವಣೆ

Public TV
2 Min Read
SMG DC Office

ಶಿವಮೊಗ್ಗ: ಇಲ್ಲಿನ ನಿರ್ಮಿತಿ ಕೇಂದ್ರದ ಬ್ಯಾಂಕ್ ಖಾತೆಯ ಹಣವನ್ನು ಸಿಬ್ಬಂದಿಯ ಖಾತೆಗೆ ವರ್ಗಾವಣೆ ಮಾಡಿ ಅವ್ಯವಹಾರ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ.

ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದಲ್ಲಿರುವ ನಿರ್ಮಿತಿ ಕೇಂದ್ರವು ವಾರ್ಷಿಕ ಸುಮಾರು 25-30 ಕೋಟಿ ರೂ. ಅನುದಾನದ ಕಾಮಗಾರಿಗಳನ್ನು ನಿರ್ವಹಣೆ ಮಾಡುತ್ತಿದೆ. ಇದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ಹಸುತ್ತಿದೆ. ಈ ಕೇಂದ್ರವು ಅಕ್ರಮಗಳ ಗೂಡಾಗಿದ್ದು, ಕಾಮಗಾರಿಗಳು ಹಾಗೂ ಅನುದಾನ ಬಳಕೆ ಬಗ್ಗೆ ಸಮಗ್ರ ತನಿಖೆ ಅಗತ್ಯವಿದೆ ಎಂಬ ಕೂಗು ಕೇಳಿ ಬಂದಿದೆ.

SMG Nirmiti Kendra

ನಿರ್ಮಿತಿ ಕೇಂದ್ರದಲ್ಲಿ ಐದು ವರ್ಷ ಕೆಲಸ ಮಾಡಿದ್ದೇನೆ. ಆದರೆ ಅಲ್ಲಿನ ಭ್ರಷ್ಟಾಚಾರದಿಂದ ಬೇಸತ್ತು ಮೂರು ತಿಂಗಳಿಂದ ಕೆಲಸ ಬಿಟ್ಟು ಹೊರ ಬಂದೆ. ಈಗ ನನಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ನಿರ್ಮಿತಿ ಕೇಂದ್ರದ ಮಾಜಿ ಉದ್ಯೋಗಿ ಗುರುರಾಜ್ ಕಾರಂತ್ ಹೇಳಿದ್ದಾರೆ.

ಶಿವಮೊಗ್ಗದ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕೇವಲ ನನ್ನ ಬ್ಯಾಂಕ್ ಖಾತೆ ಅಷ್ಟೇ ಅಲ್ಲದೆ ಉಳಿದ ಸಿಬ್ಬಂದಿಗೂ ಹಣ ಜಮಾ ಮಾಡುತ್ತಿದ್ದರು. ಪ್ರತಿ ವರ್ಷವೂ ನನ್ನ ಖಾತೆಗೆ 57 ಲಕ್ಷ ರೂ. ಜಮೆ ಮಾಡುತ್ತಿದ್ದರು. ಮತ್ತೆ ಅದನ್ನು ಪಡೆಯುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ವಿರುದ್ಧ ತಿರುಗಿಬಿದ್ದಿದ್ದಾರೆ. ಈಗಲೂ ಅಧಿಕಾರಿಗಳು ಇಂತಹ ಅವ್ಯವಹಾರ ಮುಂದುವರಿಸಿದ್ದಾರೆ ಎಂದು ದೂರಿದರು.

SMG Nirmiti Kendra A

ಯಾವುದೇ ಸರ್ಕಾರಿ ಕೆಲಸ ಮಾಡಿದರೆ ಅದು ಗುತ್ತಿಗೆದಾರನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬೇಕು. ಆದರೆ ಶಿವಮೊಗ್ಗದ ನಿರ್ಮಿತ ಕೇಂದ್ರದ ಅಧಿಕಾರಿಗಳು ತಮ್ಮ ಸಿಬ್ಬಂದಿಗೆ ಹಣವನ್ನು ವರ್ಗಾವಣೆ ಮಾಡಿ, ಬಳಿಕ ಗುತ್ತಿಗೆದಾರರಿಗೆ ನೀಡಲಾಗುತ್ತಿದ್ದಾರೆ. ನಿರ್ಮಿತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಸುಮಾರು 17 ಜನರಲ್ಲಿ 14 ಜನರ ಖಾತೆಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಜಮೆಯಾಗುತ್ತಲೇ ಇರುತ್ತದೆ ಎಂದು ವಕೀಲ ಆರ್.ಟಿ.ಐ ಕಾರ್ಯಕರ್ತ ವಿನೋದ್ ಆರೋಪಿಸಿದ್ದಾರೆ.

ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ನಾಗರಾಜ್ ಅವರು ಅಕ್ರಮ ನಡೆಸುತ್ತಿದ್ದಾರೆ. ಸಿಬ್ಬಂದಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವುದಷ್ಟೇ ಅಲ್ಲ, ಅಕ್ರಮ ಕಾಮಗಾರಿ, ಸುಳ್ಳು ದಾಖಲೆಗಳ ಸೃಷ್ಟಿ ಸೇರಿದಂತೆ ಅನೇಕ ಭ್ರಷ್ಟಾಚಾರ ನಡೆದಿವೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಆರಂಭಿಸಬೇಕಾಗುತ್ತದೆ ಎಂದು ವಿನೋದ್ ಒತ್ತಾಯಿಸಿದ್ದಾರೆ.

SMG Nirmiti Kendra B

ಈ ಬಗ್ಗೆ ಆರ್‍ಟಿಇನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ನಾಗರಾಜ್ ಅವರು, ನಮ್ಮ ಸಿಬ್ಬಂದಿ ಮೂಲಕವೇ ಕೆಲಸ ಮಾಡಿಸಿರುತ್ತೇವೆ. ಹೀಗಾಗಿ ಅವರ ಖಾತೆಗೆ ಹಣ ಹಾಕುತ್ತೇವೆ ಎಂದು ಹೇಳಿದ್ದಾರೆ. ಸಿಬ್ಬಂದಿ ಮೂಲಕವೇ ಕೆಲಸ ಮಾಡಿಸಲು ಅವಕಾಶ ಇದೇಯಾ? ಸಿಬ್ಬಂದಿ ಮೂಲಕವೇ ಮಾಡಿಸಿದರೆ ಟಿಡಿಎಸ್, ಜಿಎಸ್‍ಟಿ ಹಣವನ್ನು ಹೇಗೆ ಕಡಿತ ಮಾಡಿಸಲಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೂ ನಿರ್ಮಿತಿ ಕೇಂದ್ರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಉತ್ತರ ನೀಡಬೇಕಿದೆ ಎಂದು ಆರ್.ಟಿ.ಐ ಕಾರ್ಯಕರ್ತ ವಿನೋದ್ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *