ಶಿವಮೊಗ್ಗ: ಈ ರಾಷ್ಟ್ರದಿಂದ ಮುಸ್ಲಿಮರನ್ನು ಖಾಲಿ ಮಾಡಿಸಿದರೆ ಮುಂದಿನ 20 ವರ್ಷ ಪ್ರಧಾನಿ ಆಗಿರಬಹುದು ಎಂಬುದು ಮೋದಿಯವರ ಉದ್ದೇಶವಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕಾಗೋಡು ಅವರು, ಏಕ ಪೌರತ್ವ ಜಾರಿಗೆ ತರುವ ಮೂಲಕ ಪ್ರಧಾನಿ ಮೋದಿ ಈ ರಾಷ್ಟ್ರದ ಪ್ರಜಾತಂತ್ರ ವ್ಯವಸ್ಥೆ ಬುಡಮೇಲು ಮಾಡಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಮೋದಿಗೆ ತಕ್ಕ ಪಾಠ ಕಲಿಸದಿದ್ದರೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದೆ ಕಾಂಗ್ರೆಸ್. ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸ್ವಾತಂತ್ರ್ಯ ಉಳಿಯಬೇಕು ಅಂದರೆ ಬಿಜೆಪಿಯನ್ನು ಹೊರ ಹಾಕಬೇಕು ಹಾಗೂ ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಸಬೇಕು.
ಮೋದಿಯ ತಲೆ ತುಂಬಾ ಮುಸ್ಲಿಮರೆಲ್ಲಾ ಪಾಕಿಸ್ತಾನದ ಪರ ಇದ್ದಾರೆ ಎಂದು ತುಂಬಿಕೊಂಡಿದೆ. ಹೀಗಾಗಿಯೇ ಮುಸ್ಲಿಮರನ್ನು ಹತ್ತಿಕ್ಕಲು ಇಂತಹ ಕಾನೂನು ಜಾರಿ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಇಂದು ನಾವು ಪ್ರತಿಭಟನೆಗೆ ಮುಂದಾದರೆ ಅದನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಪ್ರತಿಭಟನೆ ಮಾಡುತ್ತೇವೆ ಎಂದು ಕಾಗೋಡು ತಿಳಿಸಿದರು.