ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಘದ ವತಿಯಿಂದ ಗಾಳಿಪಟ ಉತ್ಸವದ ಅಂಗವಾಗಿ, ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆಯಲ್ಲಿ, ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಗಾಳಿಪಟ ಬಾನಿಗೇರಿತು.
ವಿಶ್ವ ಹಿಂದುಪರಿಷತ್ ಬಜರಂಗದಳ ದೊಡ್ಡಬಳ್ಳಾಪುರ ಪ್ರಖಂಡದಿಂದ ಹರ್ಷ ಭಾವಚಿತ್ರವುಳ್ಳ ಗಾಳಿಪಟವನ್ನು ತಯಾರಿಸಲಾಗಿದ್ದು, ಗಾಳಿಪಟ ಉತ್ಸವದಲ್ಲಿ ಮುಗಿಲೆತ್ತರದಲ್ಲಿ ಹಾರಿಸಿ ಶ್ರದ್ಧಾಂಜಲಿ ಸಲ್ಲಿಸಿತು. ಇದನ್ನು ನೋಡಲು ಶಿವಮೊಗ್ಗದಿಂದ ಮೃತ ಹರ್ಷ ಸಹೋದರಿ ಅಶ್ವಿನಿ ಹಾಗೂ ತಾಯಿ ಪದ್ಮ ಅವರು ಆಗಮಿಸಿ, ಮಗನ ನೆನೆದು ಭಾವುಕರಾದರು.
ಈ ವೇಳೆ ಶಾಸಕ ಟಿ.ವೆಂಕಟರಮಣಯ್ಯ ಹರ್ಷ ಕುಟುಂಬದವರೊಂದಿಗೆ ಮಾತುಕತೆ ನಡೆಸಿ, ಆರ್ಥಿಕ ನೆರವು ನೀಡಲು ಮುಂದಾದರಾದರು. ಹರ್ಷ ಕುಟುಂಬದವರು ಸ್ವೀಕರಿಸಲು ನಿರಾಕರಿಸಿ ಜನರ ಪ್ರೀತಿ ವಿಶ್ವಾಸ ಸಾಕೆಂದರು. ನಗರದ ಕಲಾಸಿಪಾಳ್ಯ ನಿವಾಸಿ ಹವ್ಯಾಸಿ ಕಲಾವಿದ ನಿಶ್ಚಿತ್ ಗಾಳಿಪಟದ ಮೇಲೆ ಹರ್ಷ ಅವರ ಭಾವಚಿತ್ರವನ್ನು ಚಿತ್ರಿಸಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ಜೀವ ಬೆದರಿಕೆ, ಮಾನಸಿಕ ಚಿತ್ರಹಿಂಸೆ ಆರೋಪ – ಕಾಂಗ್ರೆಸ್ ನಾಯಕಿ ವಿರುದ್ಧ FIR
ಫೆಬ್ರವರಿ 20ರಂದು ಶಿವಮೊಗ್ಗದ ಕಾಮತ್ ಪೆಟ್ರೋಲ್ ಬಂಕ್ ಬಳಿ, ಬಜರಂಗದಳ ಕಾರ್ಯಕರ್ತ ಹರ್ಷ (28)ನನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಇದನ್ನೂ ಓದಿ: ಇಲಿ, ಹೆಗ್ಗಣಗಳ ಕಾಟಕ್ಕೆ ಫುಟ್ಪಾತ್ ಕಿತ್ತೋಗಿದೆ ಎಂದ ಬಿಬಿಎಂಪಿ