– 250 ಚೀಲ ಅಕ್ಕಿ, 3 ಓಮ್ನಿ, ಲಾರಿ ವಶ
ಶಿವಮೊಗ್ಗ: ಕೊರೊನಾ ಭೀತಿಯಿಂದ ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಸಾಯಬಾರದು ಎಂಬ ಕಾರಣದಿಂದ ರಾಜ್ಯ ಸರ್ಕಾರ ಕಳೆದ ಎರಡು ದಿನಗಳಿಂದ ಎರಡು ತಿಂಗಳಿನದ್ದು ಪಡಿತರ ಅಕ್ಕಿ, ಗೋಧಿ ವಿತರಿಸುತ್ತಿದೆ. ಆದರೆ ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿ ಇದೀಗ ಸಿಕ್ಕಿಬಿದ್ದಿದ್ದಾರೆ.
ಆಹಾರ ಇಲಾಖೆ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿ ಮೇರೆಗೆ ನಗರದ ಹೊರ ವಲಯದ ಕಲ್ಲೂರು ಬಳಿಯ ಫಾರಂ ಹೌಸ್ವೊಂದರ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಪಡಿತರ ಅಕ್ಕಿ ಚೀಲವನ್ನು ಬೇರೊಂದು ಚೀಲಕ್ಕೆ ಹಾಕಿ ಮಾರಾಟಕ್ಕೆ ಯತ್ನಿಸುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಸ್ಥಳದಲ್ಲಿ 250 ಚೀಲ ಪಡಿತರ ಅಕ್ಕಿಯನ್ನು ಬೇರೆ ಚೀಲಕ್ಕೆ ಹಾಕುತ್ತಿದ್ದದ್ದು ಕಂಡು ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿ ದಾಳಿ ನಡೆಸಿದ ಅಧಿಕಾರಿಗಳು 250 ಚೀಲ ಅಕ್ಕಿ, ಅದನ್ನು ಸಾಗಿಸಲು ಬಳಸುತ್ತಿದ್ದ 3 ಓಮ್ನಿ ಕಾರು, 1 ಬೊಲೆರೋ ಪಿಕ್ಅಪ್, 1 ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಓರ್ವ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.