ಹುಬ್ಬಳ್ಳಿ: ಶಿವಳ್ಳಿ ನನ್ನ ಸಹೋದರನಿಗಿಂತಲೂ ಹೆಚ್ಚು ಹಾಗೂ ಅವರ ಸರಳತೆ ಅವರನ್ನು ಬಿಟ್ಟು ಹೋಗಿರಲಿಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ವಿಧಿವಶರಾದ ಪೌರಾಡಳಿತ ಸಚಿವ ಶಿವಳ್ಳಿ ಅವರ ಅಂತಿಮ ದರ್ಶನ ಪಡೆಯಲು ಬಂದ ವೇಳೆ ಮಾತನಾಡಿದ ಅವರು, ಶಿವಳ್ಳಿ ನನ್ನ ಸಹೋದರನಿಗಿಂತಲೂ ಹೆಚ್ಚು ಆತ್ಮೀಯರಾಗಿದ್ದರು. ಅವರ ಸರಳತೆ ಅವರನ್ನು ಬಿಟ್ಟು ಹೋಗಿರಲಿಲ್ಲ. ಶಿವಳ್ಳಿ ಅಗಲಿಕೆಯ ನೋವು ನನಗೆ ತಡೆಯಲು ಆಗುತ್ತಿಲ್ಲ. ಆತ ನನ್ನ ಕುಟುಂಬದ ಸದಸ್ಯನಿಗಿಂತ ಹೆಚ್ಚಾಗಿದ್ದರು. ಶಿವಳ್ಳಿ ನನ್ನ ಆತ್ಮೀಯ ಮಿತ್ರ. ನನ್ನ ಹೃದಯಕ್ಕೆ ಹತ್ತಿರವಾದ ವ್ಯಕ್ತಿ ಎಂದು ಹೇಳಿದ್ದಾರೆ.
ನಾನೇ ಶಿವಳ್ಳಿಯವರನ್ನ ಕಾಂಗ್ರೆಸ್ಗೆ ಕರೆ ತಂದಿದ್ದೆ. ಶಿವಳ್ಳಿ ಅಗಲಿಕೆ ನಂಬಲು ಸಾಧ್ಯವಾಗುತ್ತಿಲ್ಲ. ಧಾರವಾಡದಲ್ಲಿ ಇದ್ದಾಗ ನನ್ನ ಜೊತೆ ಅರ್ಧಗಂಟೆ ಮಾತನಾಡಿದ್ದರು. ನನಗೆ ಈಗಲೂ ನಂಬಲೂ ಸಾಧ್ಯವಾಗುತ್ತಿಲ್ಲ. ಬಡವರ ಪರವಾಗಿ ಹೋರಾಟ ಮಾಡುವ ವ್ಯಕ್ತಿಯಾಗಿದ್ದರು ಎಂದರು
ಈ ವೇಳೆ ಯಡಿಯೂರಪ್ಪ ಡೈರಿ ಬಹಿರಂಗ ವಿಚಾರದ ಬಗ್ಗೆ ಡಿಕೆಶಿ ಸಾಫ್ಟ್ ಕಾರ್ನರ್ ತಾಳಿದ್ದಾರೆ. ಡೈರಿ ಬಗ್ಗೆ ಈಗಾಗಲೇ ತುಂಬಾ ಜನ ಮಾತನಾಡಿದ್ದಾರೆ. ಯಾರ್ಯಾರು ಏನೇನ್ ಮಾತನಾಡುತ್ತಾರೆ ಮಾತನಾಡಲಿ. ಮುಂದೆ ನಾನು ಮಾತನಾಡುವೆ. ನಾನು ನ್ಯಾಯಾಲಯಕ್ಕೆ ಗೌರವ ಕೊಡುವವನು. ದೇಶದ ಕಾನೂನನ್ನು ಗೌರವಿಸುತ್ತೇನೆ ಎಂದು ತಿಳಿಸಿದರು.