ಶಿವಮೊಗ್ಗ: ಕೆಲ ವಿದ್ಯಾರ್ಥಿನಿಯರು ನಮಗೆ ಪರೀಕ್ಷೆ ಮುಖ್ಯವಲ್ಲ, ಧರ್ಮ ಮುಖ್ಯ ಇದರಿಂದಾಗಿ ನಾವು ಹಿಜಬ್ ತೆಗೆಯಲ್ಲ ಎಂದು ತರಗತಿಯಿಂದ ಹೊರನಡೆದ ಘಟನೆ ಶಿವಮೊಗ್ಗದ ಬಿ.ಎಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.
ಹಿಜಬ್ ಹಾಗು ಕೇಸರಿ ಶಾಲು ವಿವಾದದ ಘರ್ಷಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಳೆದ ವಾರ ಮೂರು ದಿನಗಳ ಕಾಲ ಶಾಲಾ ಕಾಲೇಜಿಗೆ ರಜೆ ನೀಡಿತ್ತು. ಆದರೆ ಇಂದಿನಿಂದ ಸರ್ಕಾರ 9 ಹಾಗೂ 10ನೇ ತರಗತಿಗೆ ಶಾಲೆ ಆರಂಭ ಮಾಡಿತ್ತು. ಶಾಲೆ ಆರಂಭದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿತ್ತು.
ಶಿವಮೊಗ್ಗದ ಬಿ.ಎಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಂದಿನಂತೆ ತರಗತಿ ಸಹ ಆರಂಭವಾಗಿತ್ತು. ಇಂದು 10ನೇ ತರಗತಿಗೆ ತಾಲೂಕು ಮಟ್ಟದ ಪೂರ್ವಭಾವಿ ಸಿದ್ಧತಾ ಪರೀಕ್ಷೆ ಸಹ ಇತ್ತು. ತರಗತಿಗೆ ಹಾಜರಾಗಿದ್ದ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಹಿಜಬ್, ಬುರ್ಖಾ ತೆಗೆಯುವಂತೆ ಸೂಚಿಸಿದ್ದರು. ಇದನ್ನೂ ಓದಿ: ಮುಸ್ಲಿಮರ ಎಲ್ಲಾ ಚಿಹ್ನೆಗಳನ್ನು ನಾಶ ಮಾಡ್ತಿದೆ ಬಿಜೆಪಿ: ಹಿಜಬ್ ಕುರಿತು ಮುಫ್ತಿ ಪ್ರತಿಕ್ರಿಯೆ
ಕೆಲ ವಿದ್ಯಾರ್ಥಿನಿಯರು ಬುರ್ಖಾ, ಹಿಜಬ್ ತೆಗೆದಿಟ್ಟು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಪರೀಕ್ಷೆ ಆರಂಭಕ್ಕೂ ಮೊದಲು ಕೆಲವು ವಿದ್ಯಾರ್ಥಿನಿಯರು ನಾವು ಹಿಜಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ. ಇಲ್ಲದಿದ್ದರೆ ಪರೀಕ್ಷೆ ಬರೆಯುವುದಿಲ್ಲ ಎಂದು ತಗಾದೆ ತೆಗೆದಿದ್ದಾರೆ.
ಇದಕ್ಕೆ ಒಪ್ಪದ ಶಿಕ್ಷಕರು ಎಲ್ಲರೂ ಕರ್ನಾಟಕ ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ಹಿಜಬ್ ತೆಗೆದರೆ ತರಗತಿಯಲ್ಲಿ ಇರಿ, ಇಲ್ಲದಿದ್ದರೆ ಹೊರಗೆ ಹೋಗಿ ಎಂದಿದ್ದಾರೆ. ವಿದ್ಯಾರ್ಥಿನಿಯರು ಮರು ಮಾತನಾಡದೇ ನಾವು ಬೇಕಾದರೆ ಪರೀಕ್ಷೆ ಬಹಿಷ್ಕರಿಸುತ್ತೇವೆ. ಹಿಜಬ್ ತೆಗೆಯುವುದಿಲ್ಲ ಎಂದು ಶಾಲೆಯಿಂದ ಮನೆಗೆ ತೆರಳಿದ್ದಾರೆ. ಕೆಲವು ಪೋಷಕರು ಸಹ ಶಾಲೆಗೆ ಆಗಮಿಸಿ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್ ಹಾಕಿದ್ರೆ ಸೇಫ್ಟಿ ಅಲ್ವಾ ಅದ್ಕೆ ಹಿಜಬ್ ಹಾಕಿದ್ರೆ ಸೇಫ್ಟಿ ಅಂದಿದ್ದು: ಜಮೀರ್ ಸಮರ್ಥನೆ