ಬಳ್ಳಾರಿ: ಪ್ರಾಣಿಗಳಿಗೆ ಒಮ್ಮೆ ಪ್ರೀತಿಯನ್ನು ನೀಡಿದರೆ ಅವುಗಳು ಎಷ್ಟೇ ವರ್ಷಗಳಾದರೂ ಅವರನ್ನು ಮರೆಯುವುದಿಲ್ಲ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಬಳ್ಳಾರಿಯಲ್ಲಿ ಸಿಕ್ಕಿದೆ.
ಕಳೆದ ಏಳು ವರ್ಷಗಳ ಹಿಂದೆ ಬಳ್ಳಾರಿ ಮೃಗಾಲಯದಲ್ಲಿ ಜನಿಸಿದ್ದ ಜಿಂಕೆಯೊಂದು ಮೃಗಾಲಯ ಗಾರ್ಡ್ ಬಸವರಾಜ್ ಅವರ ಆರೈಕೆಯಲ್ಲಿ ಬೆಳೆದಿತ್ತು. ಅಂದು ಮೃಗಾಲಯದಲ್ಲಿ 60ಕ್ಕೂ ಹೆಚ್ಚು ಜಿಂಕೆಗಳಿಗೆ ಆಹಾರವನ್ನು ನೀಡುವ ಕೆಲಸ ನಿರ್ವಹಿಸುತ್ತಿದ್ದ ಬಸವರಾಜ್ ಅವರು ಈ ಜಿಂಕೆಗೆ ‘ಸುಂದರಿ’ ಎಂದು ನಾಮಕರಣ ಮಾಡಿದ್ದರು. ಅವರ ಪ್ರೀತಿಗೆ ಮನಸೋತ ‘ಸುಂದರಿ’ ಬಸವರಾಜ್ ಅವರನ್ನು ಹೆಚ್ಚು ಇಷ್ಟಪಟ್ಟಿತ್ತು.
ಆದರೆ ಅರಣ್ಯ ಇಲಾಖೆಯ ವರ್ಗಾವಣೆ ಪ್ರಕ್ರಿಯೆಯಂತೆ ಬಸವರಾಜ್ ಕಮಲಾಪುರ್ ಪ್ರದೇಶಕ್ಕೆ ವರ್ಗಾವಣೆಗೊಂಡಿದ್ದರು. ನಂತರ ಸತತ ಏಳು ವರ್ಷಗಳ ಅವಧಿಯಲ್ಲಿ ಬಸವರಾಜ್ ಒಮ್ಮೆಯು ಬಳ್ಳಾರಿ ಮೃಗಾಲಯಕ್ಕೆ ಭೇಟಿ ನೀಡಿರಲಿಲ್ಲ. ಪ್ರಸ್ತುತ ಹಂಪಿಯ ಅಟಲ್ ಬಿಹಾರಿ ವಾಜಪೇಯಿ ಝೂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ್ ಮೃಗಾಲಯಕ್ಕೆ ಬಳ್ಳಾರಿಯಲ್ಲಿದ್ದ ಸುಂದರಿ ಜಿಂಕೆಯನ್ನು ತಂದಿದ್ದಾರೆ. ಮತ್ತೆ ಏಳು ವರ್ಷಗಳ ಬಳಿಕ ಬಸವರಾಜ್ ಮತ್ತು ಸುಂದರಿ ಭೇಟಿಯಾಗಿದ್ದಾರೆ. ಮೊದಲ ಬಾರಿಗೆ ಜಿಂಕೆ ಅವರನ್ನು ಗುರುತು ಹಿಡಿದಿದ್ದು. ‘ಸುಂದ್ರೀ’ ಎಂದು ಕರೆದ ತಕ್ಷಣ ಗುಂಪಿನಿಂದ ಜಿಂಕೆ ಹೊರ ಬರುತ್ತದೆ.
ಮೃಗಾಲಯದ ಬೇರೆ ಎಲ್ಲಾ ಜಿಂಕೆಗಳು ಬಸವರಾಜ್ ಅವರು ಬಳಿ ಬರಲು ಹೆದರಿಕೆಯಿಂದ ದೂರ ನಡೆದರೆ, ಸುಂದರಿ ಮಾತ್ರ ಅವರ ಪಕ್ಕ ಬಂದು ನಿಲ್ಲುತ್ತದೆ. ಆಹಾರ ನೀಡಿದ ಮೇಲೂ ಜಿಂಕೆ ಗುಂಪಿನಲ್ಲಿ ತೆರಳದೇ ನನ್ನನ್ನು ಹಿಂಬಾಲಿಸುತ್ತದೆ ಎಂದು ಬಸವರಾಜ್ ತಿಳಿಸಿದ್ದಾರೆ.
ಸುಂದರಿ ತನ್ನನ್ನು 7 ವರ್ಷಗಳ ನಂತರವು ಗುರುತಿಸಿರುವುದು ಅಚ್ಚರಿಯನ್ನು ಉಂಟು ಮಾಡಿದ್ದು, ಆಕೆ ನನ್ನ ಮಗಳ ಹಾಗೇ ಎಂದು ಬಸವರಾಜ್ ಹೇಳುತ್ತಾರೆ. ಜಿಂಕೆ ಈ ವರ್ತನೆ ಮೃಗಾಲಯದ ಕೆಲಸಗಾರಲ್ಲೂ ಅಚ್ಚರಿಯನ್ನು ಮೂಡಿಸಿದ್ದು, ಸುಂದರಿಯ ಪ್ರೀತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸುಂದರಿಯ ಈ ಝೂ ನವೆಂಬರ್ 3ರಂದು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.
ಕೃಷ್ಣ ಸುಂದರಿ ಜಾತಿಗೆ ಸೇರಿರುವ ಈ ಜಿಂಕೆಗಳು ಕರ್ನಾಟಕ ಸೇರಿದಂತೆ, ಗುಜರಾತ್, ರಾಜಸ್ತಾನ್ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜ್ಯಗಲ್ಲಿ ಕಂಡು ಬರುತ್ತವೆ. ಇವುಗಳನ್ನು ವನ್ಯ ಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ರಕ್ಷಿಸಲಾಗುತ್ತಿದೆ.