ಹೈದರಾಬಾದ್: ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಪೌಲ್ಟ್ರಿ ಫಾರ್ಮ್ ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಭೋಂಗಿರ್ ಯಾದಾದ್ರಿ ಜಿಲ್ಲೆಯಲ್ಲಿ ಶುಕ್ರವಾರದಂದು ನಡೆದಿದೆ.
ಮೃತರೆಲ್ಲರೂ ಕ್ರಿಮಿನಾಶಕ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಪೌಲ್ಟ್ರಿ ಮಾಲೀಕ ರೂಮಿನಲ್ಲಿ ಮೃತರನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಮೃತರನ್ನು ಬಾಲನರಸಯ್ಯ(70), ಪತ್ನಿ ಭರತಮ್ಮ(65), ಮಗಳು ದುಬಾಶಿ ತಿರುಮಲ(35), ಅವರ ಗಂಡ ಬಾಲರಾಜು(38), ಮಕ್ಕಳಾದ ಶ್ರಾವಣಿ(13), ರಾಜೇಶ್ (11) ಹಾಗೂ ರಾಕೇಶ್(8) ಎಂದು ಗುರುತಿಸಲಾಗಿದೆ. ಈ ಬಗ್ಗೆ ರಾಜಾಪೇಟ್ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದೆ.
ಬಾಲರಾಜು ಹಣಕಾಸು ಸಮಸ್ಯೆಯಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು. ಇದಕ್ಕೆ ಕುಟುಂಬ ಸದಸ್ಯರು ಜೊತೆಗೂಡಿರುವ ಶಂಕೆ ಇದೆ ಎಂದು ಡಿಸಿಪಿ ರಾಮಚಂದ್ರ ರೆಡ್ಡಿ ಹೇಳಿದ್ದಾರೆ. ಮೃತದೇಹಗಳು ಇದ್ದ ರೂಮಿನಲ್ಲಿ ಒಂದು ಮದ್ಯದ ಬಾಟಲಿ, ಚಿಕನ್ ಅಡುಗೆ ಪತ್ತೆಯಾಗಿದೆ. ಪಕ್ಕದ ರೂಮಿನಲ್ಲಿ 3 ಕ್ರಿಮಿನಾಶಕ ಬಾಟಲಿಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
ನಾಗಭೂಷಣ್ ಅವರ ಪೌಲ್ಟ್ರಿ ಫಾರ್ಮ್ನಲ್ಲಿ ಬಾಲರಾಜು ಹಾಗೂ ಅವರ ಪತ್ನಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಮೂರು ದಿನಗಳ ಹಿಂದೆ ಬಾಲರಾಜು ತಾನು ಅನಾರೋಗ್ಯಕ್ಕೀಡಾಗಿದ್ದು, ಗುರುವಾರದಂದು ವೈದ್ಯಕೀಯ ಪರೀಕ್ಷೆಗೆ ಹೋಗುವುದಾಗಿ ತನ್ನ ಮಾಲೀಕನಿಗೆ ಹೇಳಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ಸ್ಪಷ್ಟ ಕಾರಣ ಏನಂಬುದು ಹೇಳಲು ಸಾಧ್ಯ ಎಂದು ಪೊಲೀಸರು ಹೇಳಿದ್ದಾರೆ.