ಬೆಳಗಾವಿ: ಉತ್ತರ ಕನ್ನಡ ಭಾಗದಲ್ಲಿ ಸೇವೆ ಎಂದರೆ ಕೆಲಸ ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರಿಗೆ ತಿರುಗೇಟು ನೀಡಿದ್ದಾರೆ.
ಸೇವೆ ಪದವನ್ನು ಅನರ್ಥ ಮಾಡಿಕೊಳ್ಳಬೇಡಿ. ಉತ್ತರ ಕರ್ನಾಟಕದಲ್ಲಿ ಸೇವೆ ಎಂದರೆ ಕೆಲಸ. ನೀವು ಪಕ್ಷಕ್ಕಾಗಿ ಕೆಲಸ ಮಾಡಿದ್ದೀರಿ. ಅದಕ್ಕೆ ಮಂತ್ರಿ ಸ್ಥಾನ ಸಿಕ್ಕಿದೆ ಎಂದು ಜಯಮಾಲಾಗೆ ಹೇಳುವ ಮೂಲಕ ಟಾಂಗ್ ನೀಡಿದರು. ಇದನ್ನು ಓದಿ: ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೋ ಅಂತಾ ತಿಳಿಯುತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
ಕೆಲಸದ ಅರ್ಥದಲ್ಲಿ ನಾನು ಸೇವೆ ಎಂಬ ಪದ ಬಳಸಿದ್ದೇನೆ. ಅದಕ್ಕೆ ಸಚಿವರು ತಪ್ಪು ಅರ್ಥ ಮಾಡಿಕೊಳ್ಳಬಾರದು. ಪಕ್ಷದ ಚಟುವಟಿಕೆಗಳಲ್ಲಿ ಇಬ್ಬರು ಕೂಡಿ ಸೇವೆ ಸಲ್ಲಿಸಿದ್ದೇವೆ. ಪಕ್ಷದ ಯಾವುದೇ ಕೆಲಸ ಇದ್ದರೂ ನಾನು ಜಯಮಾಲಾ ಅವರಿಗೆ ಮೊದಲು ಫೋನ್ ಕರೆ ಮಾಡುತ್ತಿದ್ದೆ. ಜಯಮಾಲಾ ಅವರಿಗೆ ಖಾತೆ ಸಿಕ್ಕಿದ್ದಕ್ಕೆ ನಾನು ಹೊಟ್ಟೆ ಕಿಚ್ಚುಪಟ್ಟಿಲ್ಲ ಎಂದು ಹೆಬ್ಬಾಳ್ಕರ್ ಹೇಳಿದರು. ಇದನ್ನು ಓದಿ: ಜಗತ್ತಲ್ಲಿ ಎಲ್ಲದಕ್ಕೂ ಔಷಧವಿದೆ, ಆದರೆ ಹೊಟ್ಟೆಕಿಚ್ಚಿಗಿಲ್ಲ: ಹೆಬ್ಬಾಳ್ಕರ್ ಗೆ ಜಯಮಾಲಾ ಟಾಂಗ್
ಏನಿದು ಟಾಂಗ್ ರಾಜಕೀಯ?
ಜೂನ್ 9 ರಂದು ಮಾಧ್ಯಮದೊಂದಿಗೆ ಮಾತನಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದೇನೆ. ಆದರೂ ನನಗೆ ಸಚಿವ ಸ್ಥಾನ ಕೈತಪ್ಪಿತು. ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಜಯಮಾಲಾ ಅವರ ಸೇವೆಯನ್ನು ಕಾಂಗ್ರೆಸ್ ಮುಖಂಡರು ಮೆಚ್ಚಿದ್ದು, ಅದೇ ಕಾರಣಕ್ಕೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದರು. ಇದಕ್ಕೆ ಸಚಿವೆ ಜಯಮಾಲಾ, ಜಗತ್ತನಲ್ಲಿ ಎಲ್ಲದಕ್ಕೂ ಔಷಧವಿದೆ. ಆದರೆ ಹೊಟ್ಟೆಕಿಚ್ಚಿಗೆ ಯಾವುದೇ ಔಷಧಿ ಇಲ್ಲವೆಂದು ತಿರುಗೇಟು ನೀಡಿದ್ದರು.