ಮಡಿಕೇರಿ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಇಡೀ ದೇಶವೇ ಲಾಕ್ಡೌನ್ ಆದ ಬಳಿಕ ಕೋಟ್ಯಂತರ ಜನರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ. ಅದರಲ್ಲಿ ಆಟೋ ಚಾಲಕರ ಸ್ಥಿತಿಯೋ ಗಂಭೀರವಾಗಿದೆ. ಇದನ್ನು ಮನಗಂಡ ಸೀರಿಯಲ್ ನಿರ್ಮಾಪಕಯೊಬ್ಬರು 200 ಆಟೋ ಚಾಲಕರಿಗೆ 1 ಲಕ್ಷ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿ ಸಹಾಯ ಮಾಡಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರದ ನಿರ್ಮಾಪಕ ಮತ್ತು ಉದ್ಯಮಿಯಾಗಿರುವ ಉಮಾಶಂಕರ್ ಅವರು ಸ್ವತಃ ಆಟೋ ಚಾಲಕರಾಗಿದ್ದವರು. ಇಂದು ಆರ್ಥಿಕವಾಗಿ ಸುಧಾರಣೆ ಆಗಿರುವ ಉಮಾಶಂಕರ್ ಕೊರೊನಾದಿಂದ ತಮ್ಮ ಸಹಉದ್ಯೋಗಿಗಳಾಗಿದ್ದ ಆಟೋ ಚಾಲಕರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಅವರಿಗೆ ಸಹಾಯ ಮಾಡಿದ್ದಾರೆ. ಸುಮಾರು 200 ಆಟೋ ಚಾಲಕರಿಗೆ ಉಮಾಶಂಕರ್ ಲಕ್ಷ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳ ಕಿಟ್ ಅನ್ನು ವಿತರಣೆ ಮಾಡಿದರು.
ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರಿಂದ ಆಟೋ ಚಾಲಕರಿಗೆ ಉಮಾಶಂಕರ್ ಕಿಟ್ ವಿತರಣೆ ಮಾಡಿಸಿದರು. ಕುಶಾಲನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಮುಖಂಡರು ಆಟೋ ಚಾಲಕರನ್ನು ನಿಲ್ಲಿಸಿದರು. ಪ್ರತೀ ಆಟೋ ಚಾಲಕರಿಗೆ ಹ್ಯಾಂಡ್ ಸ್ಯಾನಿಟೈಸರ್ ನೀಡಿ ಬಳಿಕ ಸಾಮಾಜಿಕ ಅಂತರ ಕಾಯ್ದುಕೊಂಡೇ ಕಿಟ್ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಉಮಾಶಂಕರ್ ಅವರು, ಯಾರೂ ಸಹಾಯ ಮಾಡಿ ಎಂದು ಕೇಳುವುದಿಲ್ಲ. ಆದರೆ ಇಂತಹ ಸ್ಥಿತಿಯಲ್ಲಿ ಜನರ ಪರಿಸ್ಥಿತಿ ಅರ್ಥ ಮಾಡಿಕೊಂಡು ನಿಮ್ಮ ಮನೆಗಳ ಸುತ್ತಮುತ್ತಲಿರುವ ಬಡ ಜನರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದರು.