ಬೆಂಗಳೂರು: ಅನುದಾನ ತಾರತಮ್ಯ ಖಂಡಿಸಿ ಪ್ರತ್ಯೇಕ ದೇಶ ನಿರ್ಮಾಣ ಹೇಳಿಕೆ ನೀಡಿದ ಸಂಸದ ಡಿ.ಕೆ ಸುರೇಶ್ (D K Suresh) ವಿರುದ್ಧ ಬಿಜೆಪಿ (BJP) ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ (BJP Protest) ನಡೆಸಿದ್ದಾರೆ. ಈ ವೇಳೆ ಡಿಕೆಸು ನಿವಾಸ ಮುತ್ತಿಗೆಗೆ ಕಾರ್ಯಕರ್ತರು ಯತ್ನಿಸಿದ್ದಾರೆ.
ನಗರದ (Bengaluru) ಅರಮನೆ ಮೈದಾನ ಗಾಯತ್ರಿ ವಿಹಾರದ ಗೇಟ್ನಿಂದ ಬೆಳಗ್ಗೆ 11 ಗಂಟೆಗೆ 40-50 ಯುವ ಮೋರ್ಚಾ ಕಾರ್ಯಕರ್ತರು ಕೇಸರಿ ಶಾಲು ಹಾಕಿಕೊಂಡು ಜಮಾಯಿಸಿದರು. ಬಳಿಕ ಡಿ.ಕೆ.ಸುರೇಶ್ ನಿವಾಸದ ಬೀದಿಗೆ ಕಾರ್ಯಕರ್ತರು ನುಗ್ಗಿದರು. ಈ ವೇಳೆ ಡಿಕೆಸು ವಿರುದ್ಧ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತೆರಿಗೆ ಹಣ ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ: ಕಾಂಗ್ರೆಸ್ ವಿರುದ್ಧ ಮುನಿರತ್ನ ಕಿಡಿ
ಪ್ರತಿಭಟನೆ ವೇಳೆ ಏಕಾಏಕಿ ಸಂಸದ ಸುರೇಶ್ ನಿವಾಸದ ಕಡೆ ಕೆಲವರು ನುಗ್ಗಲು ಯತ್ನಿಸಿದ್ದು, ಪೊಲೀಸರು ಅಡ್ಡಗಟ್ಟಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಇತ್ತ ಮತ್ತೊಂದು ಕಾರ್ಯಕರ್ತರ ತಂಡ ಗಾಯತ್ರಿ ವಿಹಾರ ಅರಮನೆ ಮೈದಾನ ಗೇಟ್ ಬಳಿ ಪ್ರತಿಭಟನೆ ನಡೆಸಿತು. ಈ ತಂಡವನ್ನೂ ಪೊಲೀಸರು ಬಲವಂತವಾಗಿ ಎಳೆದು ವಶಕ್ಕೆ ಪಡೆದು ಬಸ್ನಲ್ಲಿ ಕರೆದೊಯ್ದಿದ್ದಾರೆ.
ಬಿಜೆಪಿ ಯುವ ಮುಖಂಡ ಅನಿಲ್ ಶೆಟ್ಟಿ, ಪ್ರಶಾಂತ್, ಸಂದೀಪ್ ರವಿ, ಪ್ರತಾಪ್ ಸೇರಿ 40 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು. ವಶಕ್ಕೆ ಪಡೆಯುವಾಗ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಇನ್ನು ಪ್ರತಿಭಟನೆ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಶಾಂತಿಯುತ ಪ್ರತಿಭಟನಾಕಾರರ ಮೇಲೆ ಲಾಠಿಯೇಟು: ಪಿ.ರಾಜೀವ್
ಪ್ರತಿಭಟನಾನಿರತ ಕಾರ್ಯಕರ್ತರ ಮೇಲೆ ಪೊಲೀಸರು ತೀವ್ರ ಹಲ್ಲೆಯನ್ನು ಬಿಜೆಪಿ ಖಂಡಿಸಿದೆ. ಸಂವಿಧಾನ ವಿರೋಧಿ, ರಾಷ್ಟ್ರವನ್ನು ಒಡೆಯುವಂಥ ಹೇಳಿಕೆಯನ್ನು ಕೊಟ್ಟಂತಹ ವ್ಯಕ್ತಿ ಸುರಕ್ಷಿತವಾಗಿರುತ್ತಾರೆ. ರಾಷ್ಟ್ರದ ಏಕತೆಗೆ, ಸಮಗ್ರತೆಗೆ ನಿಮ್ಮ ಹೇಳಿಕೆ ಧಕ್ಕೆ ಉಂಟು ಮಾಡುತ್ತದೆ ಎನ್ನುವ ಹಾಗೂ ಶಾಂತಿಯುವ ಪ್ರತಿಭಟನೆ ಮಾಡಲು ಹೋದವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ (P.Rajeev) ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸರು ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಲಾಠಿ ಪ್ರಹಾರವನ್ನ ಖಂಡಿಸುತ್ತೇನೆ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ದೇಶ ವಿಭಜನೆ ಮಾಡುವುದು ಕಾಂಗ್ರೆಸ್ನ ಸಂಸ್ಕೃತಿ: ಬಿವೈ ರಾಘವೇಂದ್ರ