ಬೆಂಗಳೂರು: ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ನಟ ವಿನೋದ್ ರಾಜ್ ಅವರು ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಿದ ಪೊಲೀಸರಿಗೆ ಬಿಗ್ ಸೆಲ್ಯೂಟ್ ಹೊಡೆಯುವ ಮೂಲಕ ಆನಂದಬಾಷ್ಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲದ ಮನೆಯಲ್ಲಿ ಮಾತನಾಡುವಾಗ ಲೀಲಾವತಿ ಅವರು ಪಶುವೈದ್ಯೆ ಮೇಲಾದ ಅತ್ಯಾಚಾರಕ್ಕೆ ಕಣ್ಣೀರು ಹಾಕಿದ್ದಾರೆ. ಅಲ್ಲದೆ ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಒಂದು ವೇಳೆ ಪೊಲೀಸರು ಅವರನ್ನು ಎನ್ಕೌಂಟರ್ ಮಾಡದಿದ್ದರೆ, ಆರೋಪಿಗಳು ಭಯ ಪಡುತ್ತಿರಲಿಲ್ಲ. ಕಾಮುಕರಿಗೆ ಸರಿಯಾದ ಪಾಠವನ್ನು ಪೊಲೀಸರು ಕಲಿಸಿದ್ದಾರೆ. ದೇಶದಲ್ಲಿ ಇಂತಹವರಿಗೆ ಇನ್ನಷ್ಟು ಕಠಿಣ ಕಾನೂನು ಜಾರಿಗೆ ಬರಬೇಕು. ಅಲ್ಲದೆ ಸೂಕ್ತವಾದ ಶಿಕ್ಷೆಯಾಗಬೇಕು ಎಂದು ಅತ್ಯಾಚಾರಿಗಳಿಗೆ ಪೊಲೀಸರು ಕಲಿಸಿದ ಪಾಠದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಿಶಾ ಆರೋಪಿಗಳ ಎನ್ಕೌಂಟರ್- ಪೊಲೀಸರ ದಿಟ್ಟ ಕ್ರಮಕ್ಕೆ ಅದಿತಿ ಸೆಲ್ಯೂಟ್
ಇದೇ ವೇಳೆ ಈ ಪ್ರಕರಣದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಿದ ವೈದ್ಯೆಯ ಆತ್ಮಕ್ಕೆ ದೇವರು ಶಾಂತಿ ಕೊಡಲಿ. ಅವರ ಪೋಷಕರಿಗೆ ದೇವರು ದುಃಖ ಬರಿಸುವ ಶಕ್ತಿ ನೀಡಲಿ ಎಂದು ಪಶುವೈದ್ಯೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ನಟ ವಿನೊದ್ ರಾಜ್ ಅವರು ಕೂಡ ಎನ್ಕೌಂಟರ್ ಬಗ್ಗೆ ಪ್ರತಿಕ್ರಿಯಿಸಿ, ಅತ್ಯಾಚಾರ ಪ್ರಕರಣದಿಂದ ದುಃಖವಾಗಿದೆ. ಇಂತಹ ಪ್ರಕರಣಗಳು ನಡೆಯಬಾರದಾಗಿತ್ತು. ಪೊಲೀಸರು ಸರಿಯಾದ ಪ್ರತೀಕಾರ ಮಾಡಿದ್ದಾರೆ. ಅಂತಹ ಪೊಲೀಸರಿಗೆ ನನ್ನದೊಂದು ಸೆಲ್ಯೂಟ್. ಇಂತಹ ಪ್ರಕರಣಗಳು ಜರುಗದಂತೆ ಪೊಲೀಸರ ಬೀಟ್ ಹೆಚ್ಚಾಗಬೇಕು. ಪೊಲೀಸರಿಗೆ ಎಲ್ಲಾ ರೀತಿಯ ಅಧಿಕಾರ ಇದೆ. ಹೀಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಪ್ರಕರಣದಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಪಶುವೈದ್ಯೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.