ನವದೆಹಲಿ: ಆಪರೇಷನ್ ಸಿಂಧೂರದ (Operation Sindoor) ಬಳಿಕ ವಿದೇಶಾಂಗ ಸಚಿವ ಎಸ್.ಜೈಶಂಕರ್ಗೆ (S Jaishankar) ಸೇರಿ 25 ಪ್ರಮುಖರಿಗೆ ಭದ್ರತೆ ಹೆಚ್ಚಿಸಲಾಗಿದ್ದು, ಬುಲೆಟ್ ಪ್ರೂಫ್ ಕಾರು, ಕಮಾಂಡೋ ಸೆಕ್ಯೂರಿಟಿಯನ್ನು ನೀಡಲಾಗಿದೆ.
ಏ.22ರಂದು ನಡೆದ ಪಹಲ್ಗಾಮ್ ದಾಳಿಯ ಬಳಿಕ ಭಾರತ (India) ಹಾಗೂ ಪಾಕಿಸ್ತಾನದ (Pakistan) ನಡುವಿನ ಉದ್ವಿಗ್ನತೆ ಜೋರಾಗಿದ್ದು, ಕದನ ವಿರಾಮ ಘೋಷಣೆಯಾದ ಬಳಿಕ ವಿದೇಶಾಂಗ ಸಚಿವಾಲಯದ ವಿನಂತಿ ಮೇರೆಗೆ 25 ಪ್ರಮುಖರಿಗೆ ನೀಡುವ ಭದ್ರತೆಯನ್ನು ಹೆಚ್ಚಿಸಲಾಗಿದೆ.ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಕದನ ವಿರಾಮ ಘೋಷಣೆ ಯಾಕೆ? ಮೋದಿ ಉತ್ತರ ಕೊಡಲಿ – ದಿನೇಶ್ ಗುಂಡೂರಾವ್
ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರು ಹಿರಿಯ ಅಧಿಕಾರಿಗಳೊಂದಿಗೆ ಭಾನುವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, 25 ವಿಐಪಿಗಳ ಪಟ್ಟಿಯನ್ನು ತಯಾರಿಸಲಾಗಿದೆ. ಪಟ್ಟಿಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಜೆಪಿ ನಡ್ಡಾ, ಭೂಪೇಂದರ್ ಯಾದವ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಸುಧಾಂಶು ತ್ರಿವೇದಿ ಹಾಗೂ ಬಿಜೆಪಿಯ ಪ್ರಮುಖ ನಾಯಕ ಮುರಳಿ ಮನೋಹರ್ ಜೋಶಿ ಅವರ ಹೆಸರಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ Z ಸೆಕ್ಯೂರಿಟಿ ಹೊಂದಿರುವ ಜೈಶಂಕರ್ ಅವರಿಗೆ ಮತ್ತೆ ಭದ್ರತೆ ಹೆಚ್ಚಿಸಲಾಗಿದ್ದು, ಒಂದು ಬುಲೆಟ್ ಪ್ರೂಫ್ ಕಾರು, 4-6 ಕಮಾಂಡೋ ಸೇರಿ 22 ಸಿಬ್ಬಂದಿ, ಭದ್ರತೆಗೆ ಬೆಂಗಾವಲು ವಾಹನಗಳು, 33 ಸಿಆರ್ಪಿಎಫ್ ಕಮಾಂಡೋ ಹಾಗೂ ದಿನದ 24/7 ಭದ್ರತೆ ನೀಡಲಾಗಿದೆ. ಜೊತೆಗೆ ದೆಹಲಿಯಲ್ಲಿರುವ ಸರ್ಕಾರಿ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಇದಕ್ಕೂ ಮುನ್ನ ಕಳೆದ ವರ್ಷ ಅಕ್ಟೋಬರ್ನಲ್ಲಿ ಜೈಶಂಕರ್ ಅವರ ಭದ್ರತೆಯನ್ನು Y ನಿಂದ Zಗೆ ಹೆಚ್ಚಿಸಲಾಗಿತ್ತು.
ಭದ್ರತೆಗಾಗಿ ಒದಗಿಸುತ್ತಿರುವ ಕಾರುಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಇರಿಸುವಂತೆ ಹಾಗೂ ಭದ್ರತಾ ಸಿಬ್ಬಂದಿಗೆ ಫೈರಿಂಗ್ ಹಾಗೂ ವೈದ್ಯಕೀಯ ತುರ್ತು ಪರಿಸ್ಥಿತಿಗಳ ಕುರಿತು ತರಬೇತಿ ನೀಡುವಂತೆ ತಿಳಿಸಲಾಗಿದೆ.
ಮೇ 7ರಂದು ಭಾರತೀಯ ಸೇನೆ ನಡೆಸಿದ `ಆಪರೇಷನ್ ಸಿಂಧೂರ್’ದಲ್ಲಿ ಪಾಕ್ನ 9 ಭಯೋತ್ಪಾದಕ ತಾಣಗಳ ಮೇಲೆ ದಾಳಿ ನಡೆಸಲಾಗಿತ್ತು. ಇದಾದ ಬಳಿಕ ಪಾಕ್ ನಿಯಂತ್ರಣ ರೇಖೆ, ಜಮ್ಮು ಮತ್ತು ಕಾಶ್ಮೀರದಾದ್ಯಂತ ಅಪ್ರಚೋದಿತ ಶೆಲ್ ದಾಳಿ ನಡೆಸಿತು. ಬಳಿಕ ಮೇ 10ರಂದು, ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಿಸಿದ್ದು, ಇದಾದ ಬಳಿಕ ಈ ಬೆಳವಣಿಗೆ ನಡೆದಿದೆ.ಇದನ್ನೂ ಓದಿ: ಶೋಪಿಯಾನ್ನಲ್ಲಿ ಉಗ್ರರ ಹತ್ಯೆ- ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದ ಭದ್ರತಾ ಪಡೆ