– 25 ವರ್ಷ ಮಗಳನ್ನು ಹತ್ಯೆಗೈದ ಪೋಷಕರು
– ಪ್ರಿಯಕರನ ಜೊತೆ ರಹಸ್ಯ ವಿವಾಹ
– ಪೋಷಕರು ಸೇರಿದಂತೆ 6 ಮಂದಿಯಿಂದ ಕೃತ್ಯ
ನವದೆಹಲಿ: ಒಂದೇ ಗೋತ್ರದ ಹುಡುಗನನ್ನು ರಹಸ್ಯವಾಗಿ ಮದುವೆಯಾಗಿದ್ದಕ್ಕೆ ಪೋಷಕರೇ ಮಗಳನ್ನು ಕೊಲೆ ಮಾಡಿದ ಪ್ರಕರಣವನ್ನು ದೆಹಲಿ ಪೊಲೀಸರು 20 ದಿನಗಳ ನಂತರ ಬೇಧಿಸಿಸಿದ್ದಾರೆ.
ಶೀತಲ್ ಚೌಧರಿ(25) ಕೊಲೆಯಾದ ಮಹಿಳೆ. ಪೋಷಕರಾದ ರವೀಂದರ್, ಸುಮನ್ ಜೊತೆಗೆ ಕೃತ್ಯಕ್ಕೆ ಸಹಕರಿಸಿದ್ದಕ್ಕೆ ನಾಲ್ವರು ಸಂಬಂಧಿಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕಿಡ್ನಾಪ್ ದೂರು:
ಜನವರಿ 31ರಂದು ಶೀತಲ್ ಚೌಧರಿ ಕಾಣಿಸದೇ ಇದ್ದಾಗ ಪತಿ ಅಂಕಿತ್ ಭಾಟಿ ಅತ್ತೆ, ಮಾವನ ಮನೆಗೆ ಹೋಗಿ ವಿಚಾರಿಸಿದ್ದಾರೆ. ಶೀತಲ್ ಚೌಧರಿಯ ಸಂಬಂಧಿಕರು, ಸ್ನೇಹಿತರನ್ನು ವಿಚಾರಿಸಿದಾಗಲೂ ಎಲ್ಲೂ ಪತ್ತೆಯಾಗದೇ ಇದ್ದಾಗ ಫೆ.17 ರಂದು ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪತಿ ಅಂಕಿತ್ ಭಾಟಿ ಅಪಹರಣ ದೂರು ದಾಖಲಿಸುತ್ತಾರೆ.
ಜನವರಿ 20 ರಂದು ಪತ್ನಿಯ ತಾನು ಮದುವೆಯಾದ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾಳೆ. ಈ ವಿಚಾರ ತಿಳಿದು ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ರಹಸ್ಯ ಮದುವೆ: ಶೀತಲ್ ಚೌಧರಿ ಮತ್ತು ಅಂಕಿತ್ ಭಾಟಿ ಕುಟುಂಬ ಡೈರಿ ಉದ್ಯಮ ನಡೆಸುತ್ತಿದ್ದು ಎರಡು ಕುಟುಂಬಗಳು ಸಮೀಪವೇ ನೆಲೆಸಿತ್ತು. ಇಬ್ಬರು ಪರಿಚಯದಲ್ಲಿದ್ದ ಕಾರಣ ಮೂರು ವರ್ಷದ ಹಿಂದೆ ಶೀತಲ್ ಮತ್ತು ಅಂಕಿತ್ ರಹಸ್ಯವಾಗಿ ಡೇಟಿಂಗ್ ಮಾಡುತ್ತಿದ್ದರು.
ರಹಸ್ಯವಾಗಿ ಸುತ್ತಾಡುತ್ತಿದ್ದ ಇವರಿಬ್ಬರು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮದುವೆಯಾಗಿದ್ದರು. ಮದುವೆಯಾಗಿದ್ದರೂ ದಂಪತಿ ಪ್ರತ್ಯೇಕವಾಗಿ ಪೋಷಕರ ಜೊತೆ ನೆಲೆಸಿದ್ದರು.
ಜನವರಿ 29 ರಂದು ಮನೆಯಲ್ಲಿ ಮದುವೆ ವಿಚಾರ ಪ್ರಸ್ತಾಪಗೊಂಡಾಗ ಶೀತಲ್ ತಾನು ರಹಸ್ಯವಾಗಿ ಮದುವೆಯಾದ ವಿಚಾರವನ್ನು ತಿಳಿಸಿದ್ದಾಳೆ. ಈ ವಿಚಾರ ಕೇಳಿ ಕೋಪಗೊಂಡ ಪೋಷಕರು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಕಾಲುವೆಗೆ ಎಸೆದ್ರು:
ಕೊಲೆ ಮಾಡಿದ ಮೃತದೇಹವನ್ನು ಏನು ಮಾಡುವುದು ತಿಳಿಯದೇ ಇದ್ದಾಗ ಕಾರಿನಲ್ಲಿ ಎಸೆದು ಬರುವ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಎರಡು ಕಾರಿನಲ್ಲಿ 6 ಮಂದಿ 80 ಕಿ.ಮೀ ದೂರ ಪ್ರಯಾಣಿಸಿ ಉತ್ತರ ಪ್ರದೇಶದ ಸಿಕಂದರಾಬಾದ್ ಬಳಿಯ ಕಾಲುವೆಯಲ್ಲಿ ಎಸೆದು ಮನೆಗೆ ಬಂದಿದ್ದಾರೆ.
ಕಾಲುವೆಗೆ ಬಿದ್ದ ಶೀತಲ್ ಮೃತ ದೇಹ ನೀರಿನಲ್ಲಿ ತೇಲಿಕೊಂಡು ಅಲಿಘಢಕ್ಕೆ ಬಂದಿತ್ತು. ಗ್ರಾಮಸ್ಥರು ಶವವನ್ನು ನೋಡಿ ಪೊಲೀಸರಿಗೆ ತಿಳಿಸಿದ್ದರು. ಕಾಲುವೆಯಲ್ಲಿ ಅಪರಚಿತ ಮಹಿಳೆಯ ಶವಪತ್ತೆಯಾದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಹೆಣವನ್ನು ಸುಟ್ಟಿದ್ದರು. ಈ ವೇಳೆ ಶವದಲ್ಲಿದ್ದ ಉಡುಪು ಮತ್ತು ಆಕೆ ದೇಹದಲ್ಲಿದ್ದ ಇತರೇ ವಸ್ತುಗಳನ್ನು ರಕ್ಷಿಸಿಟ್ಟಿದ್ದರು.
ಫೆ.17 ರಂದು ಪ್ರಕರಣ ದಾಖಲಿಸಿದ ನಂತರ ದೆಹಲಿ ಪೊಲೀಸರು ಶೀತಲ್ ಆಪ್ತರನ್ನು ಸ್ನೇಹಿತರನ್ನು ವಿಚಾರಿಸಿದ್ದಾರೆ. ಬಳಿಕ ಪೋಷಕರನ್ನು ವಿಚಾರಿಸಿದಾಗ ಗೊಂದಲದ ಹೇಳಿಕೆ ನೀಡಿದ್ದಾರೆ. ಅನುಮಾನ ಬಂದು ಮತ್ತಷ್ಟು ವಿಚಾರಿಸಿದಾಗ ಪುತ್ರಿಯನ್ನು ಸಂಬಂಧಿಕರ ಜೊತೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಶೀತಲ್ ಕುಟುಂಬದ ಒಬ್ಬ ಸದಸ್ಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದೆವು. ಈ ವೇಳೆ ಒಬ್ಬರ ಹೇಳಿಕೆಗೂ ಮತ್ತೊಬ್ಬರ ಹೇಳಿಕೆಗೂ ತಾಳೆ ಆಗುತ್ತಿರಲಿಲ್ಲ. ಒಬ್ಬ ಸಂಬಂಧಿ ಅವಳು ಈಗಾಗಲೇ ಸತ್ತಿದ್ದಾಳೆ, ಅವಳು ಬರುವುದಿಲ್ಲ ಎಂದು ಬಾಯಿಬಿಟ್ಟಿದ್ದ. ಈ ಹೇಳಿಕೆ ಬರುತ್ತಿದ್ದಂತೆ ಆಕೆಯನ್ನು ಕೊಲೆ ಮಾಡಿರುವುದು ದೃಢವಾಯಿತು ಎಂದು ತಿಳಿಸಿದ್ದಾರೆ.
ಒಂದೇ ಗೋತ್ರ:
ಮಗಳ ಮತ್ತು ಆಕೆಯ ಪತಿ ಗೋತ್ರ ಒಂದೇ ಆಗಿದೆ. ಈ ಕಾರಣಕ್ಕೆ ನಾವು ಕೊಲೆ ಮಾಡಿ ಸಂಬಂಧಿಕರ ಸಹಾಯದಿಂದ ಕಾಲುವೆಗೆ ಶವವವನ್ನು ಎಸೆದಿದ್ದೆವು ಎಂದು ತಿಳಿಸಿದ್ದಾರೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ನೆಟ್ವರ್ಕ್ ಪರಿಶೀಲನೆ ವೇಳೆ ಜ.29 ರಂದು ಕೊಲೆ ಮಾಡಿದ ಸ್ಥಳದಲ್ಲೇ ಆರೋಪಿಗಳು ಓಡಾಡಿದ್ದರು ಎನ್ನುವುದಕ್ಕೆ ಮೊಬೈಲ್ ಟವರ್ ಲೋಕೇಶನ್ ಸಾಕ್ಷ್ಯ ಸಿಕ್ಕಿತ್ತು.