ಮೈಸೂರು: ಅಯೋಧ್ಯೆ ರಾಮಮಂದಿರಕ್ಕೆ (Ayodhya Ram Mandir) ರಾಮಲಲ್ಲಾ (ಬಾಲ ರಾಮ) ಮೂರ್ತಿ ಕೆತ್ತನೆ ಮಾಡಿದ ಬಳಿಕ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ತನ್ನ ಸಹದ್ಯೋಗಿಗಳೊಂದಿಗೆ ನೃತ್ಯ ಮಾಡಿ ಸಂಭ್ರಮಿಸಿರುವ ವೀಡಿಯೋ ವೈರಲ್ ಆಗಿದೆ.
6 ತಿಂಗಳ ಹಿಂದೆಯೇ ರಾಮಲಲ್ಲಾ ಮೂರ್ತಿ ಕೆತ್ತನೆಗಾಗಿ ಅರುಣ್ ಯೋಗಿರಾಜ್ ಅಯೋಧ್ಯೆಗೆ ತೆರಳಿದ್ದರು. ಮೂರ್ತಿ ಕೆತ್ತನೆ ಕಾರ್ಯ ಮುಗಿದಿದ್ದು, ಅಯೋಧ್ಯೆಯಲ್ಲಿ ಟ್ರಸ್ಟಿಯಿಂದ ಯೋಗಿರಾಜ್ ಮತ್ತು ತಂಡವನ್ನು ಸನ್ಮಾನಿಸಲಾಗಿದೆ. ಇದನ್ನೂ ಓದಿ: ರಾಮಲಲ್ಲಾ ಮೂರ್ತಿ ಆಯ್ಕೆ ಅಂತಿಮವಾಗಿಲ್ಲ – ಟ್ರಸ್ಟ್ನಿಂದ ಸ್ಪಷ್ಟನೆ
ನೆನಪಿನ ಕಾಣಿಕೆ ಕೊಟ್ಟು ಅಭಿನಂದಿಸಲಾಗಿದೆ. ಅದಾದ ಬಳಿಕ ಎಲ್ಲಾ ಶಿಲ್ಪಿಗಳ ಜೊತೆ ಯೋಗಿರಾಜ್ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಮೂರ್ತಿ ಕೆತ್ತನೆ ಬಗ್ಗೆ ಮಾತನಾಡಿದ್ದಾರೆ. ತಮಗೆ ಅವಕಾಶ ಸಿಕ್ಕಿದ್ದಕ್ಕಾಗಿ ಖುಷಿ ವ್ಯಕ್ತಪಡಿಸಿದ್ದಾರೆ.
ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಮೈಸೂರಿನ ಶಿಲ್ಪಿ ಯೋಗಿರಾಜ್ ಅವರು ಕೆತ್ತಿರುವ ರಾಮನ ಮೂರ್ತಿ ಆಯ್ಕೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಅಂತಿಮ ಆಯ್ಕೆ ಇನ್ನೂ ಆಗಿಲ್ಲ ಎಂದು ಅಯೋಧ್ಯೆ ಟ್ರಸ್ಟ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: Ram Mandir: ಅಯೋಧ್ಯೆ ರಾಮಮಂದಿರಕ್ಕೆ 24 ಅರ್ಚಕರು – ಇಬ್ಬರು SC, ಒಬ್ಬರು OBC ವರ್ಗದವರು ಆಯ್ಕೆ
ಇದೇ ಜ.22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗಲಿದೆ. ರಾಮಮಂದಿರ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕೂಡ ಆಗಲಿದೆ. ಅದಕ್ಕಾಗಿ ವಿವಿಧೆಡೆಯಿಂದ ಶಿಲ್ಪಿಗಳನ್ನು ಕರೆಸಿ ಮೂರ್ತಿ ಕೆತ್ತನೆ ಮಾಡಿಸಲಾಗಿತ್ತು. ಮೂರು ವಿಗ್ರಹಗಳ ಕೆತ್ತನೆಗೆ ಅವಕಾಶ ಕಲ್ಪಿಸಲಾಗಿತ್ತು. ಕೆತ್ತನೆ ಕಾರ್ಯ ಮುಗಿದಿದ್ದು, ಆಯ್ಕೆಯಾದ ಒಂದು ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುವುದು. ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಅಂತಿಮ ಘೋಷಣೆ ಇನ್ನಷ್ಟೇ ಆಗಬೇಕಿದೆ.