ಉಡುಪಿ: ರಾಜ್ಯದ ಬಹುಚರ್ಚಿತ ವಿಷಯವಾಗಿರುವ ಸಾವರ್ಕರ್ ಭಾವಚಿತ್ರಕ್ಕೆ ಸಂಬಂಧಪಟ್ಟಂತೆ ಉಡುಪಿಯಲ್ಲಿ ಕಳೆದ ಮೂರು ದಿನಗಳಿಂದ ಬ್ರಹ್ಮಗಿರಿ ಸರ್ಕಲ್ ನಲ್ಲಿ ಹೈಡ್ರಾಮಾ ಸೃಷ್ಟಿಯಾಗಿದೆ. ಇದೀಗ ಸರ್ಕಲ್ ನಲ್ಲಿ ಪ್ರತಿಮೆ ಸ್ಥಾಪಿಸುವುದಾಗಿ ಬಿಜೆಪಿ ನಗರಸಭೆಗೆ ಪತ್ರ ಕಳುಹಿಸಿದೆ.
ಹಿಂದೂ ಮಹಾಸಭಾದ ಮುಖಂಡ ಪ್ರಮೋದ್ ಉಚ್ಚಿಲ ಮತ್ತು ಇಬ್ಬರು ಗೆಳೆಯರು ಉಡುಪಿ ಬ್ರಹ್ಮಗಿರಿ ಸರ್ಕಲ್ನಲ್ಲಿ ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಸಂದರ್ಭ ಸಾವರ್ಕರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಒಳಗೊಂಡ ಕಟೌಟ್ ಹಾಕಿದ್ದರು. ಈ ಕಟೌಟ್ ಸಮಾಜದ ಶಾಂತಿಯನ್ನ ಕೆಡಿಸುತ್ತದೆ ಎಂದು ಪಿಎಫ್ಐ ಮತ್ತು ಎಸ್ಡಿಪಿಐ ಉಡುಪಿ ನಗರ ಠಾಣೆಗೆ ದೂರು ನೀಡಿತ್ತು. ಕಾಂಗ್ರೆಸ್ನ ಕೆಲ ಜಿಲ್ಲಾ ನಾಯಕರು ಈ ಕಟೌಟ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಬಿಜೆಪಿ ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ್ದರು. ಯುವಮೋರ್ಚಾದ ಕೆಲ ಕಾರ್ಯಕರ್ತರು ಬೆಳವಣಿಗೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನ ಮಾಡಿದ್ದರು. ಈ ನಡುವೆ ಯಶ್ ಪಾಲ್ ಸುವರ್ಣ ನಗರಸಭೆಗೆ ಬ್ರಹ್ಮಗಿರಿ ಸರ್ಕಲ್ನಲ್ಲಿ ಸಾವರ್ಕರ್ ಪ್ರತಿಮೆ ರಚಿಸಲು ಅನುಮತಿ ಕೋರಿ ಅರ್ಜಿ ಪತ್ರವನ್ನು ಬರೆದಿದ್ದಾರೆ.
ಪತ್ರದಲ್ಲೇನಿದೆ..?: ಉಡುಪಿ ನಗರಸಭೆಯ ಅಜ್ಜರಕಾಡು ವ್ಯಾಪ್ತಿಯಲ್ಲಿ ಬ್ರಹ್ಮಗಿರಿ ವೃತ್ತದಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿ ಹೋರಾಟ ನಡೆಸಿದ್ದ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಪುತ್ಥಳಿ ನಿರ್ಮಿಸಿ ಸಾವರ್ಕರವರ ಪುತ್ತಳಿ ನಿರ್ಮಿಸಿ ವೀರಸಾವರ್ಕರ್ ಅವರಿಗೆ ಸಮಸ್ತ ದೇಶಪ್ರೇಮಿಗಳ ಪರವಾಗಿ ಗೌರವ ಸಲ್ಲಿಸಲು ನಿರ್ಧರಿಸಿದ್ದೇವೆ. ಇದನ್ನೂ ಓದಿ: 10 ಮಕ್ಕಳನ್ನು ಹೆರಿ, ಹಣ ಪಡೆಯಿರಿ- ರಷ್ಯಾ ಮಹಿಳೆಯರಿಗೆ ಬಂಪರ್ ಆಫರ್
ಭಾರತ ಸ್ವಾತಂತ್ರ್ಯಗೊಂಡ 75 ವರ್ಷಗಳನ್ನು ಪೂರೈಸಿರುವ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಕ್ರಾಂತಿಕಾರಿ ಹೋರಾಟದ ಮೂಲಕ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನರಾಗಿದ್ದ ವೀರ ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಅತ್ಯಂತ ಸಮಂಜಸ ಸಮಯ ಬಂದೊದಗಿದ್ದು ತಾವು ನಗರಸಭೆಯ ಮೂಲಕ ಈ ಪುತ್ತಳಿ ಅಳವಡಿಸಲು ಅನುಮತಿ ನೀಡಿ ಸಹಕರಿಸಬೇಕಾಗಿ ವಿನಂತಿ.
ಹೀಗಂತ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಯಶ್ ಪಾಲ್ ಅವರಿಂದ ತಲುಪಿದ ಪತ್ರಕ್ಕೆ ಉಡುಪಿ ನಗರಸಭೆ ಸ್ವೀಕೃತಿಯನ್ನು ನೀಡಿದೆ.