ಬೆಳಗಾವಿ: ಸಚಿವ ರಮೇಶ್ ಜಾರಕಿಹೊಳಿ, ಡಿಕೆ ಶಿವಕುಮಾರ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಂದೇ ಪರಿವಾರದವರಾಗಿದ್ದು, ಕಳೆದ ಇಪ್ಪತ್ತು ವರ್ಷಗಳಿಂದ ಜೊತೆಯಾಗಿ ಇದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹಾಗೂ ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಅವರ ನಡುವೆ ಯಾವ ವಿಚಾರಕ್ಕೆ ಅಸಮಾಧಾನ ವ್ಯಕ್ತವಾಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಬೆಳಗಾವಿಯಲ್ಲಿ ಪಕ್ಷದ ಪರ ಡಿಕೆ ಶಿವಕುಮಾರ್ ಅವರು ಆಗಮಿಸಿ ರೈತರ ಹೋರಾಟಕ್ಕೆ ಭರವಸೆ ನೀಡಿ ಹೋರಾಟವನ್ನು ಹಿಂಪಡೆಯುವಂತೆ ಮಾಡಿದ್ದಾರೆ ಅಷ್ಟೇ. ಕೇವಲ ಶರಬತ್ತು ಕುಡಿಸಿದ್ರೆ ಲೀಡರ್ ಆಗಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದರು.
ಬೆಳಗಾವಿ ಕಬ್ಬು ಬೆಳಗಾರರ ಹೋರಾಟದಲ್ಲಿ ರಾಜಕೀಯ ಲೇಪನ ಮಾಡುವುದು ಸರಿಯಲ್ಲ. ಪಕ್ಷದ ಕಾರ್ಯಕರ್ತರು ಈ ಕುರಿತು ಮುಖಂಡರಿಗೆ ಮಾಹಿತಿ ನೀಡಿದ್ದರು. ಅದ್ದರಂತೆ ಸರ್ಕಾರದ ಪರ ಡಿಕೆ ಶಿವಕುಮಾರ್ ಅವರು ಪ್ರತಿಭಟನಕಾರರ ಮನವೊಲಿಕೆ ಮಾಡಿದ್ದಾರೆ. ನಾವು ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿ ಹಲವು ಹೋರಾಟಗಾರರೊಂದಿಗೆ ಚರ್ಚೆ ನಡೆಸಿದ್ದೇವೆ ಎಂದರು. ಇದನ್ನು ಓದಿ : ಬಳ್ಳಾರಿ ಆಯ್ತು ಈಗ ಜಾರಕಿಹೊಳಿ ಕೋಟೆಯಲ್ಲಿ ಹವಾ – ರೈತರ ಜೊತೆ ಡಿಕೆಶಿ ಸಂಧಾನ ಯಶಸ್ವಿ
ಇದೇ ವೇಳೆ ಡಿಕೆ ಶಿವಕುಮಾರ್ ಹಾಗೂ ರಮೇಶ್ ಅವರ ನಡುವಿನ ಅಸಮಾಧಾನದ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ ಅವರು, ಬೆಳಗಾವಿ ಪಿಎಲ್ಡಿ ಬ್ಯಾಂಕ್ ವಿಚಾರದಲ್ಲಿ ಸಚಿವ ರಮೇಶ್ ಅವರೇ ಮಧ್ಯಸ್ಥಿಕೆಗೆ ಬಂದರು. ಆದರೆ ಡಿಕೆ ಶಿವಕುಮಾರ್ ಹಾಗೂ ರಮೇಶ್ ಮುನಿಸಿಗೂ ಪಿಎಲ್ಡಿ ಬ್ಯಾಂಕ್ ಚುನಾವಣೆಗೂ ಸಂಬಂಧವಿಲ್ಲ. ಈ ಬಗ್ಗೆ ಅವರಿಗೆ ಕೇಳಿದರೆ ಅವರಿಬ್ಬರೂ ಒಂದೇ ಎಂದು ಹೇಳುತ್ತಾರೆ. ಡಿಕೆ ಶಿವಕುಮಾರ್, ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಒಂದೇ ಪರಿವಾರಕ್ಕೆ ಸೇರಿದವರು. ಕಳೆದ 20 ವರ್ಷಗಳಿಂದ ಪಕ್ಷದಲ್ಲಿ ಒಟ್ಟಿಗೆ ಬಂದಿದ್ದಾರೆ. ಆದರೆ ಅವರ ಹಳೇ ವ್ಯವಹಾರ ನನಗೆ ಏನೂ ಗೊತ್ತಿಲ್ಲ ಎಂದು ಹೊಸ ಬಾಂಬ್ ಸಿಡಿಸಿದರು.
ಇಬ್ಬರ ನಡುವೆ ಯಾವುದಾದರೂ ವ್ಯವಹಾರ ಇರಬಹುದು ಎಂದು ಹೊಸ ಬಾಂಬ್ ಹಾಕಿದ ಶಾಸಕ ಸತೀಶ್ ಜಾರಕಿಹೊಳಿ ಅವರು, ಅವರ ಪರಿವಾರ ಒಡೆಯುವ ಕೆಲಸ ನಾನು ಮಾಡಿಲ್ಲ. ಅವರಿಗೆ ಅವರೇ ಪರಿವಾರ ಒಡೆದುಕೊಂಡಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಅದ್ದರಿಂದ ಏಕೆ ಜಗಳವಾಡಿದ್ದೀರಿ ಎಂದು ಮಾಧ್ಯಮಗಳೇ ಅವರನ್ನು ಪ್ರಶ್ನೆ ಮಾಡಿ. ಕಳೆದ 6 ತಿಂಗಳ ಹಿಂದೆಯಷ್ಟೇ ಜಿಲ್ಲೆಯಲ್ಲಿ ಇವರ ಮಧ್ಯೆ ಬಂದೆ. ಪಿಎಲ್ಡಿ ಚುನಾವಣೆಯಲ್ಲಿ ಸಚಿವ ರಮೇಶ್ ಅವರು ನನಗೆ ಬೆಂಬಲ ಕೊಟ್ಟರು. ಯಾರ ಸ್ನೇಹವನ್ನ ಒಡೆಯಬೇಕು, ಬಿಡಬೇಕು ಎಂಬ ಉದ್ದೇಶ ನಮಗಿಲ್ಲ ಎಂದು ಸ್ಪಷ್ಟಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv