ಬೆಂಗಳೂರು: ಆಟೋ ಡ್ರೈವರ್ಗಳಿಂದ ಹಿಡಿದು ಕಾರಿನಲ್ಲಿ ಪ್ರಯಾಣ ಮಾಡುವಂತಹ ಎಲ್ಲ ವರ್ಗದ ಜನರೂ ನಿಮ್ಮನ್ನು ಇಷ್ಟ ಪಡ್ತಾರೆ. ನೀವು ಮಾಸ್ ಹೀರೋ ರಂಗಣ್ಣ ಸರ್ ಎಂದು ನಟ ನೀನಾಸಂ ಸತೀಶ್ (Sathish Ninasam) ಬಣ್ಣಿಸಿದರು.
‘ಪಬ್ಲಿಕ್ ಟಿವಿ’ಯ 14ನೇ ವಾರ್ಷಿಕೋತ್ಸವದ (Public TV 14th Anniversary) ಪ್ರಯುಕ್ತ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ವೀರ ಯೋಧರಿಗೆ ‘ಸಿಂಧೂರ ಸಮ್ಮಾನ’ (Sindoor Sammana) ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೂಟು-ಬೂಟು ಹಾಕ್ಕೊಂಡು ಫಾರ್ಮಲ್ ಡ್ರೆಸ್ನಲ್ಲಿ ಬಂದು ಕೂತ್ಕೊಂಡಿದ್ರೆ ಜನ ನಿಮ್ಮನ್ನು ಸ್ವೀಕರಿಸುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಅಣ್ಣನ ನೋಡಿದಂಗೆ, ದೊಡ್ಡಪ್ಪ ಮತ್ತು ಚಿಕ್ಕಪ್ಪನ ನೋಡಿದ ರೀತಿ ಎಲ್ಲರಿಗೂ ಫೀಲ್ ಆಗುತ್ತಿರುತ್ತೆ. ಅದಕ್ಕೆ ಜಗತ್ತು ನಿಮ್ಮನ್ನು ಇಷ್ಟು ಅಪ್ಪಿಕೊಂಡಿರೋದು ಎಂದು ಕೊಂಡಾಡಿದರು. ಇದನ್ನೂ ಓದಿ: ಕನ್ನಡದ ಎಲ್ಲರ ಮನೆಯ ರಂಗಣ್ಣ: ‘ಪಬ್ಲಿಕ್ ಟಿವಿ’ ವಾರ್ಷಿಕೋತ್ಸವಕ್ಕೆ ಡಾಲಿ ಧನಂಜಯ್ ವಿಶ್
ಸಣ್ಣ ಸ್ಕ್ರ್ಯಾಚ್ನಿಂದ ಹಿಡಿದು ‘ಪಬ್ಲಿಕ್ ಟಿವಿ’ ಚಾನಲ್ ಅನ್ನು ಅದ್ಭುತ ಸ್ಥಾನಕ್ಕೆ ತಂದು ನಿಲ್ಲಿಸಿದ್ದೀರಿ. ನೀವು ಮಾಸ್ ಹೀರೋ ರಂಗಣ್ಣ (H.R.Ranganath) ಸರ್. ಆಟೋ ಡ್ರೈವರ್ನಿಂದ ಹಿಡಿದು ಕಾರಿನಲ್ಲಿ ಪ್ರಯಾಣ ಮಾಡುವಂತಹ ಎಲ್ಲ ವರ್ಗದ ಜನರೂ ನಿಮ್ಮನ್ನು ಇಷ್ಟ ಪಡುತ್ತಾರೆ. ಅದನ್ನ ನಾವು ನಮ್ಮ ಕಣ್ಣಾರೆ ನೋಡಿದ್ದೀವಿ ಎಂದು ಬಣ್ಣಿಸಿದರು.

ಪ್ರತಿ ದಿನ ನಮಗಾಗುವ ತಳಮಳಗಳ ಕುರಿತು ನಾವು ಚರ್ಚೆ ಮಾಡುತ್ತಿರುತ್ತೇವೆ. ನಮ್ಮ ದೇಶ ಯಾಕೆ ಹೀಗೆ? ಯಾಕೆ ಈ ರಸ್ತೆ ಹಿಂಗೆ? ಯಾಕೆ ನಾವೆಲ್ಲ ಹಿಂಗಿದ್ದೇವೆ ಅಂತ ಪ್ರಶ್ನೆ ಮಾಡಿಕೊಳ್ಳಬೇಕಾದರೆ, ಆ ಪ್ರಶ್ನೆಯನ್ನ ವರ್ಷದ 365 ದಿನವೂ ನ್ಯೂಸ್ ಚಾನಲ್ನಲ್ಲಿ ಕುಳಿತು ಪ್ರತಿಯೊಬ್ಬರನ್ನೂ ಎಚ್ಚರಿಸುತ್ತಾ ಕೇಳೋದು ಸುಲಭದ ಮಾತಲ್ಲ. ಅದಕ್ಕೂ ಧೈರ್ಯ ಬೇಕು. ಚಾನಲ್ನಲ್ಲಿ ಕೂತು ಎಲ್ಲ ಸರ್ಕಾರಗಳನ್ನೂ ಚುಚ್ಚುತ್ತಾ, ತಿವಿಯುತ್ತಾ ಅವರನ್ನು ಸರಿಪಡಿಸುತ್ತಾ, ಸಮಾಜದ ಜೊತೆ ಕೆಲಸ ಮಾಡುತ್ತಾ ತಮ್ಮ ಜೀವನವನ್ನು ಒಂದು ಚಾನಲ್ಗಾಗಿ ಮುಡಿಪಾಗಿಡುವುದು ಸುಲಭದ ಮಾತಲ್ಲ ಎಂದು ರಂಗನಾಥ್ ಅವರ ಸಾಧನೆಯನ್ನು ಹಾಡಿಹೊಗಳಿದರು. ಇದನ್ನೂ ಓದಿ: ಪಬ್ಲಿಕ್ ಟಿವಿಗೆ 14ರ ಸಂಭ್ರಮ – ವೀರ ಯೋಧರಿಗೆ ಸಿಂಧೂರ ಸಮ್ಮಾನ
ಜೀವನದಲ್ಲಿ ಎಲ್ಲವನ್ನೂ ತ್ಯಾಗ ಮಾಡಿ ಒಬ್ಬ ವ್ಯಕ್ತಿ ಈ ಸ್ಥಾನಕ್ಕೆ ಬಂದು ನಿಂತಿದ್ದಾರೆ. ನಿಮ್ಮದೂ ದೇಶ ಸೇವೆಯೇ ಸರ್. ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಯೋಧರಿಗೆ ಮಾಡುವ ಸನ್ಮಾನವೂ ಒಂದೇ, ನಿಮಗೆ ಮಾಡುವ ಸನ್ಮಾನವೂ ಒಂದೇ. ‘ಪಬ್ಲಿಕ್ ಟಿವಿ’ಯ 14 ವರ್ಷಗಳ ಪ್ರಯಾಣಕ್ಕೆ ಅಭಿನಂದನೆಗಳು ಎಂದು ನಟ ನೀನಾಸಂ ಸತೀಶ್ ಶುಭಹಾರೈಸಿದರು.
ನಮ್ಮ ಯೋಧರಿಗೆ ನಾವು ಗೌರವ ಕೊಡಬೇಕು. ಅವರು ತ್ಯಾಗ ಮನೋಭಾವದಿಂದ ಗಡಿಯಲ್ಲಿ ನಿಂತು ಕೆಲಸ ಮಾಡ್ತಾರೆ. ದೇಶದೊಳಗಿನ ಜನರು ಚೆನ್ನಾಗಿರಬೇಕು ಅಂತ ನಮ್ಮ ಯೋಧರು ಕಷ್ಟ ಪಡ್ತಾರೆ. ಆದರೆ, ನಮ್ಮಲ್ಲೇ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ನಮ್ಮಲ್ಲಿ ಕೊಳಕುತನದ ಮನೋಭಾವ ಇದೆ. ನಮ್ಮಲ್ಲೇ ಗುಂಡಿಗಳನ್ನು ತೋಡುತ್ತಿದ್ದೇವೆ. ಭ್ರಷ್ಟಾಚಾರದಿಂದ ನಮ್ಮ ದೇಶ ಮುಕ್ತವಾಗಲಿ ಎಂದು ನಟ ಆಶಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿಗೆ 14ರ ಸಂಭ್ರಮ – ವೀರ ಸೈನಿಕರಿಗೆ ವಾರ್ಷಿಕೋತ್ಸವ ಅರ್ಪಣೆ

