ಮಂಡ್ಯ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಜಿಲ್ಲೆಯ ಕೆಆರ್ಪೇಟೆ ಪಟ್ಟಣದ ಪ್ರಗತಿ ಪಾಠಶಾಲೆಯಲ್ಲಿ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ.
ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಕ್ಕಳು ಹಾಗೂ ಪೋಷಕರು ಸಾಂಪ್ರದಾಯಿಕ ಉಡುಗೆ-ತೊಡುಗೆಯನ್ನು ತೊಟ್ಟು, ಮೆರವಣಿಗೆ ನಡೆಸಿ ಸಾರ್ವಜನಿಕರಿಗೆ ಎಳ್ಳು ಬೆಲ್ಲವನ್ನು ವಿತರಿಸಿ ಭಾವೈಕ್ಯತೆ ಹಾಗೂ ನಮ್ಮ ಸಂಸ್ಕೃತಿ ಪರಂಪರೆಗೆ ಸಾಕ್ಷಿಯಾದರು.
ಅಲ್ಲದೇ ಕೆಆರ್ಪೇಟೆ ಪಟ್ಟಣದ ಪುರಾಣ ಪ್ರಸಿದ್ಧವಾದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಸಂಕ್ರಾಂತಿ ಸುಗ್ಗಿ ಸಂಭ್ರಮಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಕೆ.ಕಾಳೇಗೌಡ ಅವರು ಚಾಲನೆ ನೀಡಿದರು. ನಂತರ ಶ್ರವಣಬೆಳಗೊಳ ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದ ರಂಗಸ್ಥಳದಲ್ಲಿ ಸುಗ್ಗಿ ನೃತ್ಯವನ್ನು ಮಾಡಿ ಸಂಭ್ರಮಿಸಿದರು.
ಮಕ್ಕಳು ಪಟ್ಟಣದ ಜನತೆಗೆ ಹಾಗೂ ಮಕ್ಕಳಿಗೆ ಎಳ್ಳುಬೆಲ್ಲವನ್ನು ವಿತರಿಸಿ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮಕ್ಕಳ ಈ ಸಂಭ್ರಮವನ್ನು ವೀಕ್ಷಣೆ ಮಾಡಿದ ಜನರು ಸಹ ಫುಲ್ ಏಂಜಾಯ್ ಮಾಡಿದರು.