ಪ್ರೀತಿ ಎಂದರೇನು? ನಿಜವಾದ ಪ್ರೀತಿ ಯಾವುದು? ಈ ಎರಡು ಪ್ರಶ್ನೆಗೆ ಒಂದೇ ರೀತಿಯ ಉತ್ತರ ಕೇಳಿಬರಲಿಕ್ಕೆ ಸಾಧ್ಯನೇ ಇಲ್ಲ. ಪ್ರೀತಿ ಅನ್ನೋದು ಕೇವಲ ಎರಡಕ್ಷರದ ಪದ ಆಗಿರಬಹುದು. ಆದರೆ, ಆ ಎರಡಕ್ಷರದ ಪ್ರೀತಿಗೆ ಬೆಲೆ ಕಟ್ಟುವುದಕ್ಕೆ ಸಾಧ್ಯಾನೇ ಇಲ್ಲ. ಅಷ್ಟಕ್ಕೂ ನಾವು ಈ ಕ್ಷಣ ಈ ಪ್ರೀತಿ ಕುರಿತಾಗಿ ಪೀಠಿಕೆ ಹಾಕ್ತಿರುವುದಕ್ಕೆ ಕಾರಣ ಸಂಗಮೇಶ್ (Sangamesh) ಜೀವಸಖಿ. ಯಾರು ಈ ಸಂಗಮೇಶ್? ಹೀಗೊಂದು ಪ್ರಶ್ನೆಯ ಜೊತೆಗೆ `ಜೀವಸಖಿ’ ಮೇಲೆಯೂ ಕುತೂಹಲ ಮೂಡಿರುತ್ತೆ. ಅದಕ್ಕೆ ಬ್ರೇಕ್ ಹಾಕ್ಬೇಕು ಅಂದರೆ, ನಿಜವಾದ ಪ್ರೀತಿಗೆ ಸಾಕ್ಷಿಯಾಗಲು ನಿಮ್ಮೆಲ್ಲರ ಮುಂದೆ ಕಿರುಚಿತ್ರದ ಮೂಲಕ ಬರುತ್ತಿರುವ `ಜೀವಸಖಿ’ ಬಗ್ಗೆ ಹೇಳಲೇಬೇಕು.
ಯಸ್, `ಜೀವಸಖಿ’ (Jeevasakhi) ಹೆಸರಲ್ಲಿ ಕನ್ನಡದಲ್ಲೊಂದು ಕಿರುಚಿತ್ರ ತಯಾರಾಗಿದೆ. ಕೆ. ಸಂಗಮೇಶ್ ಪಾಟೀಲ್ ಅನ್ನೋರು ಈ ಕಿರುಚಿತ್ರ ನಿರ್ದೇಶಿಸಿ, ನಿರ್ಮಿಸಿದ್ದಾರೆ. ನಾಲ್ಕೇ ನಾಲ್ಕು ಕ್ಯಾರೆಕ್ಟರ್ ಗಳನ್ನಿಟ್ಟುಕೊಂಡು ಚೆಂದದ ಕಥೆ ಹೆಣೆದಿದ್ದಾರೆ. ಮೇಲ್ನೋಟಕ್ಕೆ ಅದೇ ಲವ್ವು, ಬ್ರೇಕಪ್ಪು, ಮರ್ಡರ್ ಮಿಸ್ಟರಿ ಸ್ಟೋರಿ ಎನಿಸಿದರೂ ಕೂಡ `ಜೀವಸಖಿ’ ಒಡಲಲ್ಲಿ ಹೆಣ್ತತನದ ಕಥನ ಉಸಿರಾಡುತ್ತಿದೆ. ಅದನ್ನು ಜಗತ್ತಿನ ಮುಂದೆ ಹರವಿಡಲೆಂದೇ ಬರೀ 35 ನಿಮಿಷದಲ್ಲಿ `ಜೀವಸಖಿ’ ಕಿರುಚಿತ್ರ ಕಟ್ಟಿಕೊಟ್ಟಿದ್ದಾರೆ. ಸತ್ಯ ಹಾಗೂ ಜನನಿ ಪಾತ್ರಕ್ಕೆ ಯುವರಾಜ್ ಪಾಟೀಲ್ (Yuvraj Patil) ಹಾಗೂ ಸೌಂದರ್ಯ ಗೌಡ (Soundarya Gowda) ಜೀವತುಂಬಿದ್ದು, ಸತ್ಯ ಸ್ನೇಹಿತನಾಗಿ ನಾರದಮುನಿ ಅಭಿನಯಿಸಿದ್ದಾರೆ. ಟ್ರೈಲರ್ ಹಾಗೂ ಹಾಡಿನ ಮೂಲಕ ಕುತೂಹಲ ಮೂಡಿಸಿದ್ದ `ಜೀವಸಖಿ’ `ಸಂಗಮ್ ಟಾಕೀಸ್’ ಮೂಲಕ ಯೂಟ್ಯೂಬ್ ಲೋಕಕ್ಕೆ ಎಂಟ್ರಿಕೊಟ್ಟಿದ್ದಾಳೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ಪ್ರದೀಪ್ ಈಶ್ವರ್ : ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ
`ಜೀವಸಖಿ’ ಹೆಸರಿಗೆ ಮಾತ್ರ ಕಿರುಚಿತ್ರವಷ್ಟೇ. ಯಾಕಂದ್ರೆ, ಕಂಟೆಂಟ್ ಪ್ಲಸ್ ಕ್ವಾಲಿಟಿ ವೈಸ್ ನೋಡಿದ್ರೆ ಯಾವ ಫೀಚರ್ ಫಿಲ್ಮ್ ಗೂ ಕಡಿಮೆಯಿಲ್ಲದಂತೆಯೇ ಕಟ್ಟಿಕೊಟ್ಟಿದ್ದಾರೆ. ಬೆಂಗಳೂರು ಸುತ್ತಮುತ್ತವೇ ಶೂಟಿಂಗ್ ಮಾಡಿದ್ದು, ಜೀವನ್ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಸೂರಜ್ ಜೋಯಿಸ್ ಸಂಗೀತ, ಸುನೀಲ್ ಎಲ್ಎಸ್ಆರ್ ಸಂಕಲನ ಚಿತ್ರಕ್ಕಿದ್ದು, ಸಂಗಮ್ ಟಾಕೀಸ್ ನಿರ್ಮಾಣದಲ್ಲಿ ಸಿನಿಮಾ ರೇಂಜ್ಗೆ ಈ ಶಾರ್ಟ್ ಫಿಲ್ಮ್ ನಿರ್ಮಾಣಗೊಂಡಿದೆ. ಇವತ್ತು ಬೆಂಗಳೂರಿನಲ್ಲಿ ಸ್ಪೆಷಲ್ ಸ್ಕ್ರೀನಿಂಗ್ ಕೂಡ ನಡೆದಿದೆ. ವಿಶೇಷ ಅಂದರೆ `ಗ್ಲೋಬಲ್ ಇಂಡಿ ಫಿಲ್ಮ್ ಅವಾರ್ಡ್ಸ್’ ಹಾಗೂ ಸಂಗ್ರೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಡೈರೆಕ್ಟರ್, ಬೆಸ್ಟ್ ಸ್ಕ್ರೀನ್ ಪ್ಲೇ ರೈಟರ್ ಸೇರಿದಂತೆ ಐದಾರು ವಿಭಾಗದಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಇನ್ನೂ ಅನೇಕ ಫಿಲ್ಮ್ ಫೆಸ್ಟಿವಲ್ ಗಳಲ್ಲಿ `ಜೀವಸಖಿ’ ನಾಮಿನೇಟ್ ಕೂಡ ಆಗಿದೆ.
ಸಿನಿಮಾ ನಿರ್ದೇಶಕನಾಗ್ಬೇಕು ಎನ್ನುವ ಕನಸೊತ್ತು ಗದಗ ಜಿಲ್ಲೆಯ ನರಗುಂದದಿಂದ ಗಾಂಧಿನಗರಕ್ಕೆ ಬಂದಿಳಿದಿದ್ದ ಸಂಗಮೇಶ್, ಯೋಗೇಶ್ ಮಾಸ್ಟರ್ ಅವರ ಕಲಾತ್ಮಕ ಸಿನಿಮಾಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಸಿನಿ ಕರಿಯರ್ ಶುರು ಮಾಡಿದ್ದಾರೆ. ನಂತರ ದಿನಕರ್ ತೂಗುದೀಪ್ ನಿರ್ದೇಶನದ `ಲೈಫ್ ಜೊತೆ ಒಂದ್ ಸೆಲ್ಫಿ’, `ಗಿರ್ಕಿ’, `ನಾನು ಮತ್ತು ಗುಂಡ’ ಸೇರಿದಂತೆ ಹಲವು ಸಿನಿಮಾಗಳಿಗೆ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಆಗಿ ಕೆಲಸ ಮಾಡಿ ಗುರ್ತಿಸಿಕೊಂಡಿದ್ದಾರೆ. ಇನ್ನೇನು ಸ್ವತಂತ್ರ ನಿರ್ದೇಶಕನಾಗಿ ಕಣಕ್ಕಿಳಿಬೇಕು ಎನ್ನುವಷ್ಟರಲ್ಲಿ ನಿರ್ಮಾಪಕರು ಹಿಂದೇಟು ಹಾಕಿದ್ದರಿಂದ ತನ್ನ ಪ್ರತಿಭೆಯನ್ನು ಅನಾವರಣ ಮಾಡಲಿಕ್ಕೆ `ಜೀವಸಖಿ’ ಮೊರೆ ಹೋಗಿದ್ದಾರೆ. ಸಮಾನಮನಸ್ಕರ ತಂಡ ಕಟ್ಟಿಕೊಂಡು `ಜೀವಸಖಿ’ ಮೂಲಕ ಅಖಾಡಕ್ಕಿಳಿದಿದ್ದಾರೆ.
35 ನಿಮಿಷವುಳ್ಳ ಕಿರುಚಿತ್ರದ ಮೂಲಕ ತನ್ನ ಕ್ಯಾಲಿಬರ್ ಏನು ಎಂಬುದನ್ನು ಸಾಬೀತುಪಡಿಸಿರುವ ಸಂಗಮೇಶ್ ಅವರಿಗೆ ಈಗಾಗಲೇ ಹಲವರಿಂದ ಕರೆ ಬಂದಿದೆ. ನಿನಗೆ ಸಿನಿಮಾ ಮಾಡುವ ಕ್ಯಾಪಾಸಿಟಿ ಇದೆ. ಈ ನಟನಿಗೆ ನೀನು ಆ್ಯಕ್ಷನ್ ಕಟ್ ಹೇಳಿದರೆ, ಹೀಗೊಂದು ಸಿನಿಮಾ ಮಾಡಿದರೆ ಸೂಪರ್ ಹಿಟ್ ಆಗುತ್ತೆ ಅಂತ ಸಜೆಷನ್ ಕೊಡುತ್ತಿದ್ದಾರಂತೆ. ಈ ಬಗ್ಗೆ ಖುಷಿಯಿಂದಲೇ ನಮ್ಮೊಟ್ಟಿಗೆ ಮಾತಿಗಿಳಿದು ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡ ಯುವ ನಿರ್ದೇಶಕ ಸಂಗಮೇಶ್, ಕ್ವಾಲಿಟಿ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡುವ ಕನಸು ಹರವಿಟ್ಟರು. ಕಂಟೆಂಟ್ ಈಸ್ ಆಲ್ವೇಸ್ ಕಿಂಗ್ ಎಂದು ಮಾತು ಮುಗಿಸಿದರು. ಎನಿವೇ ಈ ಕನಸುಗಾರನ ಕನಸು ಈಡೇರಲಿ. ಒಂದೊಳ್ಳೆ ಸಿನಿಮಾ ಮೂಲಕ ಸಂಗಮೇಶ್ ಬೆಳ್ಳಿಪರದೆ ಬೆಳಗಲಿ
Web Stories